ಮಂಗಳೂರು; ಚಿರತೆಯನ್ನು ಸೆರೆ ಹಿಡಿಯಲು ಇರಿಸಿದ್ದ ಬೋನಿಗೆ ನಾಯಿಯೊಂದು ಬಿದ್ದ ಘಟನೆ ಕದ್ರಿ ಕೈಬಟ್ಟಲು ಡಾಕ್ಟರ್ಸ್ ಲೇನ್ ಬಳಿ ನಡೆದಿದೆ.
ಕದ್ರಿ ಕೈಬಟ್ಟಲು ಡಾಕ್ಟರ್ಸ್ ಲೇನ್ ಬಳಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಚಿರತೆಯ ಓಡಾಟ ಕಂಡುಬಂದಿತ್ತು. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಬುಧವಾರ ನಾಗಬನದ ಬಳಿ ಬೋನು ಇರಿಸಿದ್ದರು. ಗುರುವಾರ ಬೆಳಗ್ಗೆ ಆ ಬೋನಿನಲ್ಲಿ ನಾಯಿ ಸೆರೆಯಾಗಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ನಾಯಿಯನ್ನು ಬೋನಿನಿಂದ ಹೊರಗೆ ತೆಗೆದಿದ್ದಾರೆ.
ಡಾಕ್ಟರ್ಸ್ ಲೇನ್ನಲ್ಲಿ ಎರಡು ದಿನ ರಾತ್ರಿ ವೇಳೆ ಪತ್ತೆಯಾಗಿದ್ದ ಚಿರತೆಯು ಬುಧವಾರ ರಾತ್ರಿ ಪತ್ತೆಯಾದ ಬಗ್ಗೆ ವರದಿಯಾಗಿಲ್ಲ. ಹಾಗಾಗಿ ಚಿರತೆಯ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಗುರುವಾರವೂ ನಾಗಬನದ ಬಳಿ ಬೋನು ಇಡಲಾಗಿದೆ. ಇಲಾಖೆಯ ಸಿಬ್ಬಂದಿ ವರ್ಗವು ನಿಗಾ ವಹಿಸಿದೆ. ಈ ಮಧ್ಯೆ ನಗರದ ಪಂಪ್ವೆಲ್ ಬಳಿ ಕೂಡ ಚಿರತೆ ಓಡಾಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅದು ದೃಢಪಟ್ಟಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


