ನೆಲ್ಯಾಡಿಯಲ್ಲಿ ವೃದ್ಧ ಕೆ.ಸಿ ವರ್ಗೀಸ್ (73) ಅವರ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ವಿ. ತೋಮಸ್ (39), ಸಿ.ಟಿ ರಾಜು (59), ಚಾಕೊಚ್ಚ (51)ಬಂಧಿತರು.
ಫೆ.9 ರಂದು ಉಪ್ಪಿನಂಗಡಿ ಠಾಣೆಯಲ್ಲಿ ಕೆ.ಸಿ ವರ್ಗೀಸ್ ಅವರ ಸಾವಿಗೆ ಸಂಬಂಧಪಟ್ಟಂತೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಕೆ.ಸಿ ವರ್ಗೀಸ್ ಮೃತ ವ್ಯಕ್ತಿಯ ತಲೆಗೆ ಉಂಟಾದ ಗಂಭೀರ ಹಲ್ಲೆಯಿಂದಾಗಿ ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯದಿಂದಾಗಿ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ಬಂದಿದೆ.
ಪ್ರಕರಣದ ವಿವರ;
ಮೃತ ಕೆ.ಸಿ ವರ್ಗಿಸ್ ತನ್ನ ಹೆಂಡತಿಗೆ ಹೊಡೆದಿದ್ದಾರೆ. ಇದನ್ನು ನೋಡಿದ ಒಬ್ಬ ವ್ಯಕ್ತಿ ಈ ಬಗ್ಗೆ ಆಕೆಯ ಮಗ ಕೆ.ವಿ ತೋಮಸ್ ಗೆ ತಿಳಿಸಿದ್ದಾನೆ. ಮಗನು ತನಗೆ ಪರಿಚಯದ ಒಬ್ಬ ಆಟೋ ರಿಕ್ಷಾದವರನ್ನು ಬರಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾನೆ. ಆಗ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ನೋಡಿ ತನ್ನ ತಮ್ಮ ಚಾಕೋಚ್ಚನಿಗೆ ಕಾಲ್ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿರುವುದಾಗಿ ತಿಳಿಸಿ ಬೇಗ ಬಾ ಎಂದು ಕರೆದಿದ್ದಾನೆ. ಹಾಗೆ ಬಂದು ಥಾಮಸ್ ಗೆ ಕರೆ ಮಾಡಿ ವರ್ಗೀಸ್ ರನ್ನು ಹೆದರಿಸಬೇಕೆಂದು ಚರ್ಚೆ ಮಾಡಿ ಥಾಮಸ್ ನನ್ನು ಸ್ವಲ್ಪ ದೂರ ಹೊರಗೆ ಬಿಟ್ಟು ಚಾಕೊಚ್ಚ ಮತ್ತು ರಾಜುರವರು ಒಳಗೆ ಹೋಗಿ ಮೃತ ಕೆ.ಸಿ ವರ್ಗಿಸ್ ರವರಿಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ.
ಬಳಿಕ ಹೊರಗೆ ಬಂದು ಥಾಮಸ್ ರವರಲ್ಲಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ ಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿ ಹೋಗಿದ್ದಾರೆ. ನಂತರ ಆಸ್ಪತ್ರೆಯಲ್ಲಿ ಹೋಗಿ ಥಾಮಸ್ ನು ತನ್ನ ತಂದೆಯು ಮಂಚದಿಂದ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಪೆಟ್ಟಾಗಿ ಮೃತರಾಗಿರಬಹುದಾಗಿ ಇದೊಂದು ಆಸ್ವಾಭಾವಿಕ ಪ್ರಕರಣವೆಂದು ತಿಳಿಸಿದ್ದಾನೆ.ಆದರೆ ಸಂದೇಹದ ಹಿನ್ನೆಲೆ ಉಪ್ಪಿನಂಗಡಿ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ. ಅದರಂತೆ ಮೂವರನ್ನು ಬಂಧಿಸಿದ್ದಾರೆ.


