ಮಂಗಳೂರು; ಕಡಲೆ ಬೀಜವನ್ನು ನುಂಗಿದ ಪರಿಣಾಮ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಮಗುವಿನ ಜೀವ ಉಳಿಸಿದೆ.
ಮನೆಯಲ್ಲಿ ಆಟವಾಡುತ್ತಿರುವ ವೇಳೆ 10 ತಿಂಗಳ ಮಗು ಕಡಲೆಬೀಜ ಸೇವಿಸಿತ್ತು, ಬಳಿಕ ಕೆಮ್ಮಲು ಆರಂಭಿಸಿ, ಕೆಲ ಸಮಯದಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ದಿನ ಕಳೆಯುತ್ತಿದ್ದಂತೆ ಮಗು ನಿತ್ರಾಣಗೊಂಡು, ಉಸಿರಾಟದ ಸಮಸ್ಯೆ ಎದುರಿಸಲು ಶುರುಮಾಡಿತು. ಪಾಲಕರು ಪುತ್ತೂರಿನ ವೈದ್ಯರೊಬ್ಬರಿಗೆ ತೋರಿಸಿದಾಗ, ಅವರು ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಲುಕಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಮಗುವನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದು, ಮಕ್ಕಳ ತಜ್ಞೆ ಡಾ. ಸ್ವಾತಿ ರಾವ್ ತಪಾಸಣೆ ನಡೆಸಿ, ಮಗುವಿಗೆ ಆಗಿರುವ ತೊಂದರೆ ಗಮನಿಸಿದ್ದಾರೆ
ಶ್ವಾಸನಾಳದಲ್ಲಿ ಕಡಲೆಬೀಜದ ತುಣುಕು ಸಿಲುಕಿದ್ದರಿಂದ ಬಲ ಶ್ವಾಸಕೋಶದಲ್ಲಿ ಉಬ್ಬರ ಮತ್ತು ಎಡ ಶ್ವಾಸಕೋಶ ಮತ್ತು ಹೃದಯದ ಸಂಕೋಚನ ಕಂಡುಬಂದಿತ್ತು. ತಕ್ಷಣ ಮಗುವನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ಡಾ. ಗೌತಮ್ ಕುಲಮರ್ವ ಅವರು ಕ್ಲಿಷ್ಟಕರವಾದ ಬ್ರೊಂಕೊಸ್ಕೊಪಿಕ್ ವಿಧಾನದ ಮೂಲಕ ಕಡಲೆಬೀಜದ ತುಣುಕನ್ನು ಹೊರತೆಗೆದಿದ್ದಾರೆ. ಅರವಳಿಕೆ ತಜ್ಞ ಡಾ. ಸುನಿಲ್ ಮತ್ತು ಡಾ. ಫ್ರೀಡಾ ತಂಡದಲ್ಲಿದ್ದರು ಎನ್ನಲಾಗಿದೆ.


