ಕಾರ್ಕಳ; ಮಕ್ಕಳಿಗೆ ತಂದೆಯೊಬ್ಬರು ಹೊಡೆಯುತ್ತಿರುವ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಸಾಮಾಜಿಕ ಕಾರ್ಯಕರ್ತೆ ಶೇರ್ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಕ್ಕಳ ಕಲ್ಯಾಣ ಸಮಿತಿ ತುರ್ತು ನೋಟಿಸ್ ಜಾರಿ ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ನಿಟ್ಟೆ ಬಳಿ ತಂದೆಯೋರ್ವ ತನ್ನ ಮಕ್ಕಳಿಗೆ ಹೊಡೆಯುತ್ತಿರುವ ವಿಡಿಯೋ ವನ್ನು ಸಮಾಜ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ತನ್ನ ಫೇಸ್ಬುಕ್ ಪೇಜ್ನಲ್ಲಿ ಹಾಕಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಮಕ್ಕಳ ಕಲ್ಯಾಣ ಸಮಿತಿ ತುರ್ತು ನೋಟಿಸ್ ಜಾರಿ ಮಾಡಿದೆ.

ವೀಡಿಯೋದಲ್ಲಿ ವಿಲಾಸಿನಿ ಮತ್ತು ತಂದೆ ಲಕ್ಷ್ಮಣ್ ದಂಪತಿ ಮಕ್ಕಳಾದ ಕೃಷ್ಣ, ರಾಘವೇಂದ್ರ, ಸೂರ್ಯ ಹಾಗೂ ಶ್ರೇಯ ಎಂಬ ನಾಲ್ವರು ಮಕ್ಕಳಿಗೆ ತಂದೆ ಲಕ್ಷ್ಮಣ್ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿ, ಮಕ್ಕಳ ಮೇಲಾಗುವ ಸಮಸ್ಯೆಗಳ ಬಗ್ಗೆ ರಮಿತ ಸೂರ್ಯವಂಶಿ ಅವರು ಮಾತನಾಡುವ ವೀಡಿಯೋ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಕ್ಕಳ ಕಲ್ಯಾಣ ಸಮಿತಿ ಉಡುಪಿ ತುರ್ತು ಕ್ರಮ ಕೈಗೊಂಡಿದೆ.
ಈ ಹಿಂದೆ ಲಕ್ಷ್ಮಣ್ ಅವರು ಮಕ್ಕಳಿಗೆ ಹೊಡೆದು ಕಿರುಕುಳ ನೀಡಿದ ಘಟನೆ ನಡೆದಿತ್ತು. ಬಳಿಕ ಮಕ್ಕಳನ್ನು ಮಕ್ಕಳ ವಿಶೇಷ ಕಲ್ಯಾಣ ಘಟಕದಲ್ಲಿ ಇಡಲಾಗಿತ್ತು. ಕೆಲ ಸಮಯಗಳ ಹಿಂದೆ ಮಕ್ಕಳು ಮರಳಿ ಮನೆ ಸೇರಿದ್ದರು. ಮಕ್ಕಳ ತಂದೆ ಲಕ್ಷಣ್ ಅವರು ಮತ್ತದೆ ವರ್ತನೆ ತೋರಿರುವುದು ರಮಿತಾ ಸೂರ್ಯವಂಶಿ ಅವರ ಗಮನಕ್ಕೆ ಬಂದಿತ್ತು.ಮನೆಯ ವಾಸ್ತವ ಸ್ಥಿತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಎಚ್ಚೆತ್ತ ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಪ್ರಸ್ತುತ ಸ್ಥಿತಿ–ಗತಿಗಳನ್ನು ಪರಿಶೀಲಿಸುವ ಅಗತ್ಯವನ್ನು ತುರ್ತು ಎಂದು ಪರಿಗಣಿಸಿದೆ.ಸಂಬಂಧಿತ ವಿಚಾರಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ್ ಅವರು, ಪೋಷಕರು ಹಾಗೂ ಮಕ್ಕಳು 27-11-2025ರಂದು ಸಮಿತಿಯ ಮುಂದೆ ಹಾಜರಾಗುವಂತೆ ನಿರ್ದೇಶನ ಹೊರಡಿಸಿದ್ದಾರೆ. ಜೊತೆಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬನ್ನಂಜೆ, ಉಡುಪಿ ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಿ ಸಹಕರಿಸಲು ವಿನಂತಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ರಕ್ಷಣಾ ಘಟಕ – ಸಿಬ್ಬಂದಿಗಳನ್ನು ನಿಯೋಜಿಸಿ, ಸಮನ್ವಯತೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.


