ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಭೀಕರ ಕಾರು ಸ್ಫೋಟದ ಮುಖ್ಯ ಆರೋಪಿ ಡಾ.ಉಮರ್ ನಬಿ ಅಲಿಯಾಸ್ ಉಮರ್ ಉನ್-ನಬಿಯ ಕಾಶ್ಮೀರದ ಮನೆಯನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿವೆ.
ಕಳೆದ ಮಧ್ಯರಾತ್ರಿ ಪುಲ್ವಾಮಾ ಜಿಲ್ಲೆಯ ಕೊಯಿಲ್ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಉಮರ್ ಮನೆ ಧ್ವಂಸವು ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನಿಸಿದೆ. ಇಂತಹ ಕೃತ್ಯಗಳು ಎಷ್ಟೇ ದೊಡ್ಡ ಬೆಲೆ ತೆರಬೇಕಾದರೂ ತೆರಬೇಕು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ತನಿಖೆ ಇನ್ನೂ ಮುಂದುವರಿದಿದೆ. ಉಳಿದ ಜಾಲ ಸದಸ್ಯರ ಪತ್ತೆಗೆ ದೇಶಾದ್ಯಂತ ಶೋಧ ಚುರುಕುಗೊಂಡಿದೆ. ಈ ಘಟನೆ ಒಂದು ಭೀಕರ ಎಚ್ಚರಿಕೆಯಾಗಿದೆ.
ಇನ್ನು ಡಾ. ಉಮರ್ ನಬಿಯನ್ನು ಆತ್ಮಹತ್ಯಾ ಬಾಂಬರ್ ಎಂದು ಗುರುತಿಸಲಾಗಿದ್ದು, ಆತನ ಮನೆಯಲ್ಲಿ ಭದ್ರತಾ ಪಡೆಗಳು ಧ್ವಂಸ ಮಾಡಿದ್ದಾರೆ.
ಸೋಮವಾರ ಸಂಜೆ ಸುಮಾರು 6:50ಕ್ಕೆ ಸ್ಫೋಟಕಗಳಿಂದ ತುಂಬಿದ ಹುಂಡೈ ಐ20 ಕಾರನ್ನು ಡಾ. ಉಮರ್ ಚಲಾಯಿಸಿ ಕೆಂಪು ಕೋಟೆ ಬಳಿ ಸ್ಫೋಟಿಸಿದ್ದ. ಈ ದಾಳಿಯಲ್ಲಿ 13 ಜನರು ಸಾವನಪ್ಪಿದ್ರೆ, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ಆಘಾತಕ್ಕೆ ಸುತ್ತಮುತ್ತಲಿನ ವಾಹನಗಳು ಛಿದ್ರಗೊಂಡು, ಹಲವು ಸಾವು ನೋವುಗಳು ಸಂಭವಿಸಿವೆ. ತನಿಖೆಯಲ್ಲಿ ಸ್ಫೋಟ ಸ್ಥಳದಿಂದ ಸಂಗ್ರಹಿಸಿದ ಡಿಎನ್ಎ ಮಾದರಿಗಳು ಉಮರ್ ತಾಯಿಯ ಡಿಎನ್ಎಗೆ ಹೊಂದಿಕೊಂಡಿದ್ದು, ಆತನೇ ಸ್ಫೋಟಕಾರಿ ಎಂಬುದು 100% ದೃಢಪಟ್ಟಿದೆ.
ತನ್ನ ಊರಿನಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ವೈದ್ಯ ಎಂದು ಹೆಸರಾಗಿದ್ದ ಉಮರ್ ಕಳೆದ ಎರಡು ವರ್ಷಗಳಲ್ಲಿ ತೀವ್ರವಾದಿಯಾಗಿ ಮಾರ್ಪಟ್ಟಿದ್ದ. ಸಾಮಾಜಿಕ ಜಾಲತಾಣದಲ್ಲಿ ಮೂಲಭೂತವಾದಿ ಗುಂಪುಗಳನ್ನು ಸೇರಿಕೊಂಡು ತೀವ್ರ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಆರೋಪವಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆತನ ಚಲನವಲನ ಸ್ಪಷ್ಟವಾಗಿ ಕಂಡುಬಂದಿದೆ. ಸ್ಫೋಟಕ್ಕೆ 24 ನಿಮಿಷ ಮೊದಲು ಸುನೇಹ್ರಿ ಮಸೀದಿ ಪಾರ್ಕಿಂಗ್ನಲ್ಲಿ ಮಧ್ಯಾಹ್ನ 3:19ಕ್ಕೆ ಕಾರು ನಿಲ್ಲಿಸಿ, ಸಂಜೆ 6:28ಕ್ಕೆ ಹೊರಟಿದ್ದ ದೃಶ್ಯವೂ ಸಿಕ್ಕಿದೆ ಎನ್ನಲಾಗಿದೆ. ಇಂಡಿಯಾ ಗೇಟ್?, ಕಾಶಿ, ಅಯೋಧ್ಯೆಯಂತಹ ಪ್ರಮುಖ ಸ್ಥಳಗಳನ್ನು ಉಗ್ರರು ಟಾರ್ಗೆಟ್? ಮಾಡಿಕೊಂಡಿದ್ದರು ಎಂಬುದು ಬಯಲಾಗಿದೆ.


