ಮಂಗಳೂರು: ಉಳ್ಳಾಲ ಬೀಚ್ ನಲ್ಲಿ ಮೊಗವೀರಪಟ್ಣದ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ಮಾನವೀಯತೆ ಮೆರೆದ ಘಟನೆ ನಡೆದಿದೆ.
ಉಳ್ಳಾ ಬೀಚ್ ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ಸುಮಾರು 4 ಕಿಲೋಮೀಟರ್ ದೂರ ತಮ್ಮ ಹೆಗಲ ಮೇಲೆ ಹೊತ್ತು ಸಾಗಿಸಿ ಆಂಬುಲೆನ್ಸ್ ಗೆ ಹಸ್ತಾಂತರಿಸಿ ಮಾನವೀಯತೆ ಪ್ರದರ್ಶಿಸಿದ್ದಾರೆ.
ಘಟನೆಯ ವಿವರ: ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ಶುಕ್ರವಾರ ತಡರಾತ್ರಿ ಅಳಿವೆಬಾಗಿಲು ಬ್ರೇಕ್ವಾಟರ್ ಬಂಡೆಗಳ ಬಳಿ ಬಲೆ ಬೀಸಿದ್ದು, ಈ ಸಂದರ್ಭದಲ್ಲಿ ಅವರಿಗೆ ಬಂಡೆಗಳ ನಡುವೆ ಸಿಲುಕಿದ್ದ ಕೊಳೆತ ಸ್ಥಿತಿಯ ಮೃತದೇಹವೊಂದು ಕಂಡುಬಂದಿದೆ. ಅವರು ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಉಳ್ಳಾಲ ಪೊಲೀಸರು ಸಂದೇಶ ಸ್ವೀಕರಿಸಿದ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರಿಗೆ ಮಾಹಿತಿ ರವಾನಿಸಿದರು.
ಪೊಲೀಸರ ಕರೆಗೆ ಸ್ಪಂದಿಸಿದ ಸದಸ್ಯರಾದ ಯೋಗೀಶ್ ಅಮೀನ್, ಪ್ರಸಾದ್ ಸುವರ್ಣ ಮತ್ತು ಚಂದ್ರಹಾಸ್ ಸುವರ್ಣ ಅವರು ಸ್ಥಳಕ್ಕೆ ಧಾವಿಸಿದರು. ಅವರು ಕೊಳೆತ ದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು, ಕಠಿಣವಾದ ಕಡಲ ತೀರದ ಮೂಲಕ ಸುಮಾರು 3 ರಿಂದ 4 ಕಿ.ಮೀ. ದೂರ ಸಾಗಿಸಿ, ಬಳಿಕ ಆಂಬುಲೆನ್ಸ್ ಗೆ ತಲುಪಿಸಿದರು.


