ಪುತ್ತೂರು : ನಾಗರಹಾವು ಕಚ್ಚಿ ತೀವ್ರ ಗಂಭೀರ ಸ್ಥಿತಿಯಲ್ಲಿದ್ದ ವೃದ್ಧರೊಬ್ಬರನ್ನು 90 ಇಂಜೆಕ್ಷನ್ ನೀಡಿ ಆದರ್ಶ ಆಸ್ಪತ್ರೆಯ ವೈದ್ಯರು ಬದುಕಿಸಿದ ಅಚ್ಚರಿಯ ಘಟನೆ ನಡೆದಿದೆ.
ಪುತ್ತೂರಿನ ಗೋಳಿತ್ತೊಟ್ಟಿನ ಶಾಂತಿನಗರ ನಿವಾಸಿ ಶೀನಪ್ಪ ಗೌಡ(63) ಎಂಬವರು ಬೆಳಗ್ಗೆ ತೋಟಕ್ಕೆ ಬಾಳೆಗೊನೆ ಕಡಿಯಲು ಹೋಗಿದ್ದರು. ಈ ವೇಳೆ ಅವರ ಎಡಕಾಲಿನ ಹಿಂಭಾಗಕ್ಕೆ ನಾಗರಹಾವೊಂದು ಕಚ್ಚಿದೆ. ಇದರಿಂದ ಅಸ್ವಸ್ಥಗೊಂಡ ಶೀನಪ್ಪ ಗೌಡರನ್ನು ಮನೆಯವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೆಪ್ಟೆಂಬರ್ 21 ರಂದು ಮಧ್ಯಾಹ್ನ 3.30ಕ್ಕೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆಗಾಗಲೇ ವಿಷದ ಪ್ರಮಾಣದಿಂದಾಗಿ ಶೀನಪ್ಪ ಗೌಡರು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಶೀನಪ್ಪ ಗೌಡ ಅವರನ್ನು ಬದುಕಿಸಲು ವೈದ್ಯರು ಬರೋಬ್ಬರಿ 90 ಇಂಜೆಕ್ಷನ್ ನೀಡಿದ್ದಾರೆ. ವೈದ್ಯರ ಸತತ ಪ್ರಯತ್ನದಿಂದ ಕೊನೆಗೂ ಶೀನಪ್ಪ ಗೌಡ ಅವರು ಬದುಕುಳಿದಿದ್ದಾರೆ. ವೈದ್ಯರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


