ಬೆಳ್ತಂಗಡಿ: ಓಂಕಾರದಿಂದ ಸೃಷ್ಟಿತ ಭಜನೆ ಭಕ್ತಿಯ ಅನುಸಂದಾನವಾಗಿದೆ. ಧರ್ಮಸ್ಥಳದ ಭಜನಾ ಕಮ್ಮಟದಿಂದ ಧರ್ಮ ಸಂಸ್ಕೃತಿ ಜಾಗೃತವಾಗಿದೆ. ಭಜನೆ ಅನ್ನುವಂತಹದು ಪರಂಪರೆ ಹಾಗೂ ಸಂಸ್ಕೃತಿಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆದ 27 ನೇ ವರ್ಷದ ಭಜನಾ ಕಮ್ಮಟದ ಪ್ರಯುಕ್ತ ಸೆ.21 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಶ್ರೀ ಧ.ಮಂಜುನಾಥೇಶ್ವರ ಭಜನಾ ಪರಿಷತ್ ಯಪಾಧ್ಯಕ್ಷರಾದ ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಉಪಾಧ್ಯಕ್ಷ ರಾಜೇಂದ್ರ ಬಸ್ರೂರು ಉಪಸ್ಥಿತರಿದ್ದರು.
ರಾಜ್ಯ ಭಜನಾ ಪರಿಷತ್ತಿನ ಪರವಾಗಿ ಡಾ.ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರಿಗೆ ಭಜನಾ ಪರಿಷತ್ತಿನ ಅಧ್ಯಕರು ಹಾಗೂ ಉಪಾಧ್ಯಕ್ಷರಿಂದ ಗೌರವಾರ್ಪಣೆ ನೆರವೇರಿತು. ಚೈತ್ರಾ ಮತ್ತು ಬಳಗದಿಂದ ಭಜನಾ ಪ್ರಾತ್ಯಕ್ಷಿಕೆ, ಸಂದೇಶ್ ಬಳಗದಿಂದ ನೃತ್ಯ ಭಜನಾ ಪ್ರಾತ್ಯಕ್ಷಿಕೆ, ಶಂಕರ್ ಶಾನಭಾಗ್ ರಿಂದ ಸಾಮೂಹಿಕ ಕುಣಿತ ಭಜನೆ ನೆರವೇರಿತು.
* ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಾರ್ಪಣೆ:
ಸಂಪನ್ಮೂಲ ವ್ಯಕ್ತಿಗಳಾದ ಶಂಕರ್ ಶಾನಭಾಗ್, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಸೌಮ್ಯಾ ಸುಭಾಷ್, ಡಾ.ಐ.ಶಶಿಕಾಂತ್ ಜೈನ್, ಜಯರಾಮ್ ಭಟ್ ಬೆಂಗಳೂರು ಅವರನ್ನು ಗೌರವ ಸಲ್ಲಿಸಲಾಯಿತು.ಶ್ರೀ ಧ.ಮಂ.ಭಜನಾ ಕಮ್ಮಟ ಕಾರ್ಯದರ್ಶಿ ಎ.ವಿ.ಶೆಟ್ಟಿ ವರದಿ ವಾಚಿಸಿದರು. ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಸಿದರು. ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ವಂದಿಸಿದರು. ಭಜನಾ ಕಮ್ಮಟ ಸದಸ್ಯ ಶ್ರೀನಿವಾಸ್ ರಾವ್ ನಿರೂಪಿಸಿದರು. ಸೌಮ್ಯ ಸುಭಾಷ್ ಮಂಗಲ ಹಾಡಿದರು.
ಯೋಗ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ಓಂಕಾರ ಪಠಿಸಿದರು. ಉಷಾ ಹೆಬ್ಬಾರ್, ಶಂಕರ ಶಾನಭಾಗ್ ಶ್ಲೋಕ, ಭಜನೆ ಹಾಡಿದರು. ವಿದುಷಿ ಚೈತ್ರಾ ಮತ್ತು ತಂಡದಿಂದ ದೃಶ್ಯರೂಪಕ ನೆರವೇರಿತು. ಶಿಬಿರಾರ್ಥಿಗಳಾದ ಕೃಷ್ಣ ಪೂಜಾರಿ, ಭವಿಷ್ಯ ಅನಿಸಿಕೆ ವ್ಯಕ್ತಪಡಿಸಿದರು.


