ಬೆಳ್ತಂಗಡಿ: ತನ್ನ ಮಕ್ಕಳ ಹುಟ್ಟು ಹಬ್ಬವೆಂದರೆ ಲೆಕ್ಕವಿಲ್ಲದಷ್ಟು ಖರ್ಚು ಮಾಡಿ ಬಾಡೂಟ ಮತ್ತು ಕುಡಿತಕ್ಕೆ ಹಣ ವ್ಯಯಿಸುವ ಪೋಷಕರೇ ಹೆಚ್ಚಾಗಿರುವ ಈಗಿನ ಕಾಲಘಟ್ಟದಲ್ಲಿ ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಕೋಟ್ಯಾನ್ ಟೈಲರಿಂಗ್ ಶಾಪ್ ನ ಮಾಲೀಕ ಸುರೇಂದ್ರ ಕೋಟ್ಯಾನ್ ತನ್ನ ಮಗಳ ಹುಟ್ಟುಹಬ್ಬವನ್ನು ಜಗತ್ತಿಗೆ ಮಾದರಿಯಾಗುವಂತೆ ಆಚರಿಸಿದ್ದಾರೆ.
![](https://new.mahaxpress.com/wp-content/uploads/2020/07/belthangady-3-1.jpg)
ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಕೋಟ್ಯಾನ್ ಟೈಲರಿಂಗ್ ಶಾಪ್ ಇಟ್ಟುಕೊಂಡು ತನ್ನದೇ ಆದ ಸಂಘಟನೆಯನ್ನು ಬೆಳೆಸಿ ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಕ್ರಿಯವಾಗಿ ಸಮಾಜಮುಖಿ ಸೇವೆ ಮಾಡುತ್ತಾ ಕಷ್ಟದಲ್ಲಿರುವವರನ್ನು ಗುರುತಿಸಿ ಸಂಘಟನೆ ಜೊತೆಗೆ ತನ್ನಿಂದ ಆದಷ್ಟು ಆರ್ಥಿಕವಾಗಿ ಸಹಾಯ ಮಾಡುತ್ತಾ ಬಂದಿರುವ ಸುರೇಂದ್ರ ಕೋಟ್ಯಾನ್ ರವರು ತನ್ನ ಪುತ್ರಿ ಕುಮಾರಿ ಮಲ್ಲಿಕಾ ಕೋಟ್ಯಾನ್ ರವರ 11ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅನಗತ್ಯವಾಗಿ ಖರ್ಚು ಮಾಡದೇ ಒಂದು ತಿಂಗಳ ಹಿಂದೆ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಮರದಿಂದ ಬಿದ್ದು ಬೆನ್ನುಮೂಳೆಗೆ ಗಂಭೀರವಾಗಿ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಈಗ ವಿಶ್ರಾಂತಿಯಲ್ಲಿರುವ ಬಡ ಕುಟುಂಬದ ವ್ಯಕ್ತಿಯನ್ನು ಆಯ್ಜೆ ಮಾಡಿ ಅವರಿಗೆ ಒಂದು ವಾರಕ್ಕೆ ಬೇಕಾದಷ್ಟು ತರಕಾರಿ ಮತ್ತು ಜಿನಸಿ ಸಾಮಗ್ರಿಗಳನ್ನು ನೀಡಿ ತನ್ನ ಮಗಳ ಹುಟ್ಟುಹಬ್ಬದ ಜೊತೆಗೆ ಮಾನವೀಯತೆಯನ್ನು ಮೆರೆದು ಸಮಾಜಕ್ಕೆ ಆದರ್ಶರಾಗಿದ್ದಾರೆ.
![](https://new.mahaxpress.com/wp-content/uploads/2020/07/belthangady-2-1.jpg)
ಗೇರುಕಟ್ಟೆ ಸಮೀಪದ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಜಲಡ್ಡ ಎಂಬಲ್ಲಿ ವಾಸವಾಗಿರುವ ವೀರಪ್ಪ ಪೂಜಾರಿಯವರ ಮಗ ಸಂದೀಪ್ ಪೂಜಾರಿಯವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಇವರನ್ನು ಆಶ್ರಯಿಸಿ ಅಜ್ಜಿ ಮತ್ತು ಚಿಕ್ಕಮ್ಮ ಮತ್ತು ಓರ್ವ ಸಹೋದರಿ ಇದ್ದಾರೆ.ಸಂದೀಪ್ ಪೂಜಾರಿಯವರು ದಿನಾಂಕ 29.6.2020 ರಂದು ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮರದಿಂದ ಆಯತಪ್ಪಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ನಡೆಯಲಿಕ್ಕೆ ಆಗದೆ ವಿಶ್ರಾಂತಿಯಲ್ಲಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿರುವ ಈ ಬಡ ಕುಟುಂಬಕ್ಕೆ ಸಂದೀಪ್ ರವರೇ ಆಶ್ರಯದಾತರು.ಇನ್ನೂ ಆರು ತಿಂಗಳ ಕಾಲ ವಿಶ್ರಾಂತಿ ಬೇಕೆಂದು ವೈದ್ಯರು ತಿಳಿಸಿದ್ದು ಅಷ್ಟರ ವರೆಗೆ ಇವರಿಗೆ ಆರ್ಥಿಕವಾಗಿ ಸಹಾಯದ ಅಗತ್ಯವಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬದ ಸಮಸ್ಯೆಯನ್ನು ಗುರುತಿಸಿ ಸಹಾಯ ಮಾಡಿದ ಸುರೇಂದ್ರ ಕೋಟ್ಯಾನ್ ರವರು ನಿಜಕ್ಕೂ ಅಭಿನಂದನೆಗೆ ಅರ್ಹರು. ತನ್ನ ಮಗಳ ಹುಟ್ಟು ಹಬ್ಬಕ್ಕೆ ನಾನು ಮನೆಯಲ್ಲಿ ಖರ್ಚು ಮಾಡಿದ್ರೆ ಅದು ಒಂದು ದಿವಸಕ್ಕೆ ಮರೆತು ಹೋಗುತ್ತೆ.ಆದ್ರೆ ಯಾರಿಗಾದರೂ ಕಷ್ಟದಲ್ಲಿರುವವರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿದ್ರೆ ಅದು ಯಾವಾಗಲೂ ನೆನಪಿರುತ್ತೆ ಎಂದು ಕೋಟ್ಯಾನ್ ರವರು ಹೆಮ್ಮೆಯಿಂದ ಹೇಳುತ್ತಾರೆ.
ಸಂದೀಪ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿರ್ವೆರೆ ಕುಡ್ಲ ಇದರ ಗೇರುಕಟ್ಟೆ ವಲಯ ಅಧ್ಯಕ್ಷರಾದ ಯೋಗೀಶ್ ಸುವರ್ಣ, ರಂಗಭೂಮಿ ಕಲಾವಿದ ಪ್ರಕಾಶ್ ಸವಣಾಲು, ಬರಹಗಾರರಾದ ಸದಾನಂದ ಸಾಲಿಯಾನ್ ಬಳಂಜ, ಸುರೇಂದ್ರ ಕೋಟ್ಯಾನ್ ಉಷಾ ದಂಪತಿಗಳ ಪುತ್ರಿ ಮಲ್ಲಿಕಾ ಉಪಸ್ಥಿತರಿದ್ದರು.
ಸಹಾಯ ನೀಡುವವರಿಗೆ
ಸಂದೀಪ್ ರವರ ಬ್ಯಾಂಕ್ ಖಾತೆ ನಂಬರ್- 02142250019353
ಸಿಂಡಿಕೇಟ್ ಬ್ಯಾಂಕ್ ಗೇರುಕಟ್ಟೆ. SYNB000021.