ಕಾರವಾರ; ಕಾನೂನಿನ ಕಣ್ಣಿಗೆ ಮಣ್ಣೆರಚೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಅನ್ನೋದು ಈ ಪ್ರಕರಣದಲ್ಲಿ ಸಾಬೀತಾಗಿದೆ. ತಪ್ಪು ಮಾಡಿವರು ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇ ಬೇಕು..
30 ವರ್ಷದ ಹಿಂದೆ ವಿದ್ಯಾರ್ಥಿಯೊಬ್ಬನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಆತನಿಂದ 200 ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನು ಬರೋಬ್ಬರಿ 30 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಬೈಂದೂರು ಮೂಲದ ಪ್ರಸ್ತುತ ಬೆಂಗಳೂರಿನ ಬಳೆಪೇಠೆಯಲ್ಲಿ ನೆಲಸಿರುವ ಬಿ.ಕೆ.ರಾಮಚಂದ್ರರಾವ್ ಬಂಧಿತ ಆರೋಪಿ. ಈತನಿಗೆ 1990 ರಲ್ಲಿ ನೀಲಕಂಠ ಹೆಗಡೆ ಎಂಬವನ ಮೂಲಕ ಶಿರಸಿಯಲ್ಲಿ ಪದವಿ ಓದುತ್ತಿದ್ದ ಬಿಳಿಗಿರಿ ಕೊಪ್ಪ ವೆಂಕಟೇಶ ವೈದ್ಯ ಎಂಬಾತನ ಪರಿಚಯವಾಗಿತ್ತು. ರಾಮಚಂದ್ರರಾವ್ ವೆಂಕಟೇಶ್ ಎಂಬಾತನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಆತನಿಂದ 200 ರೂ. ಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದ.
ಈ ಕುರಿತು ಶಿರಸಿ ಠಾಣೆಯಲ್ಲಿ ವೆಂಕಟೇಶ್ ವೈದ್ಯ ದೂರು ದಾಖಲಿಸಿದ್ದರು. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ. ಆದರೇ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಮಾರ್ಗದರ್ಶನ ಮತ್ತು ಪಿಎಸ್ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ಅವರ ತಂಡ 30 ವರ್ಷದ ನಂತರ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಿ ಶಿರಸಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ. ಇದೀಗ ಆತನನ್ನು ಕಾರವಾರ ಜೈಲಿಗೆ ಹಾಕಲಾಗಿದೆ.


