Friday, June 27, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ; ನಾರಾವಿಯ ಮಹಿಳೆ ಮೃತ್ಯು

ಬೆಳ್ತಂಗಡಿ : ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ; ನಾರಾವಿಯ ಮಹಿಳೆ ಮೃತ್ಯು

spot_img
- Advertisement -
- Advertisement -

ಬೆಳ್ತಂಗಡಿ : ಹೆರಿಗೆಯ ನಂತರ ಉಂಟಾದ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ನಾರಾವಿಯ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಜೂ.4 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ನೂಜೋಡಿ ಮಾಪಾಲ ಮನೆ ನಿವಾಸಿ ಶೇಖರ ಮಲೆಕುಡಿಯ ಎಂಬವರ ಪತ್ನಿ ಶ್ರೀಮತಿ ಮಧುರಾ (29) ಮೃತಪಟ್ಟ ಮಹಿಳೆ.

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೊಯನಾಡು ಬಾಬು ಮಲೆಕುಡಿಯ ಮತ್ತು ಚಿನ್ನಮ್ಮ ದಂಪತಿ ಪುತ್ರಿ ಮಧುರಾ ಅವರನ್ನು ಕಳೆದ ಆರು ವರ್ಷಗಳ ಹಿಂದೆ ನಾರಾವಿ ಗ್ರಾಮದ ನೂಜೋಡಿ ಮನೆ ನಿವಾಸಿ ಶೇಖರ ಮಲೆಕುಡಿಯ ಅವರು ವಿವಾಹವಾಗಿದ್ದರು. ಅವರಿಗೆ ಮೂರುವರೆ ವರ್ಷದ ಗಂಡು ಮಗುವಿದೆ. ಮಧುರಾ ಅವರು ಮತ್ತೆ ಗರ್ಭವತಿಯಾಗಿ ಸಂಪಾಜೆಯ ತಾಯಿ ಮನೆಗೆ ತೆರಳಿದ್ದರು. ಹೆರಿಗೆಗಾಗಿ ಜೂ.2 ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಜೂ.3ರಂದು ಸಂಜೆ 6.45ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ರಾತ್ರಿ 9 ಗಂಟೆಗೆ ತಾಯಿಗೆ ತೀವ್ರ ರಕ್ತಸ್ರಾವ ಉಂಟಾಗುತ್ತಿದೆ ಎಂದು ಅಲ್ಲಿಯ ವೈದ್ಯರು ತಿಳಿಸಿದ್ದಂತೆ, ಅಂಬ್ಯುಲೆನ್ಸ್ನಲ್ಲಿ ಮಧುರಾ ಅವರನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ರಾತ್ರಿ 11:30 ಕ್ಕೆ ಕರೆತಂದು ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 12:37 ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ.

ಮಂಗಳೂರು ಆಸ್ಪತ್ರೆಯಲ್ಲಿ ಮಧುರಾ ಅವರ ಮರಣೋತ್ತರ ಪರೀಕ್ಷೆ ಮಾಡದೆ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು. ಮನೆಯವರು ಅಂಬ್ಯುಲೆನ್ಸ್ ನಲ್ಲಿ ಶವವನ್ನು ನಾರಾವಿಯ ಪತಿಯ ಮನೆಗೆ ತಂದಿದ್ದರು. ಶವದ ಅಂತಿಮ ಸಂಸ್ಕಾರಕ್ಕೆ ತಯಾರಿಯನ್ನು ನಡೆಸಲಾಗಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ಮನೆಯವರಿಗೆ ಹಸ್ತಾಂತರಿಸಿದ ಬಗ್ಗೆ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಮತ್ತಿತ್ತರ ನಾಯಕರು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ಮೃತ ಮಧುರಾ ಅವರ ಕುಟುಂಬಸ್ಥರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿ, ಶವದ ಮರಣೋತ್ತರ ಪರೀಕ್ಷೆ ನಡೆಸದೆ ಮೃತ ದೇಹವನ್ನು ತುರ್ತಾಗಿ ಬಿಡುಗಡೆ ಮಾಡಲಾಗಿದೆ. ಮಧುರಾ ಅವರ ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಶವದ ಮರಣೋತ್ತರ ಪರೀಕ್ಷೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಮಗುವಿನ ಭವಿಷ್ಯಕ್ಕಾಗಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದರು. ಈ ವಿಷಯವನ್ನು ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ನಾರಾವಿಯ ಮನೆಗೆ ಬಂದು ಪರಿಶೀಲನೆ ನಡೆಸಿ ಮನೆಯವರ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ಮೃತದೇಹವನ್ನು ಪುನಃ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕೊಂಡೋಗಿ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ನಾರಾವಿಯ ಪತಿಯ ಮನೆಯ ಬಳಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

- Advertisement -
spot_img

Latest News

error: Content is protected !!