ಕಾಪು: ಸೌದಿ ಅರೇಬಿಯಾದಲ್ಲಿ ವಾಸವಿದ್ದ ಕುಟುಂಬವೊಂದರ ಕಾಫು ಬಳಿಯಿರುವ ಮನೆಮಲ್ಲಾರು ಆರ್. ಡಿ. ಮಂಜಿಲ್ಗೆ ಕಳ್ಳನೋರ್ವ ನುಗ್ಗಿ ನಗದು ಮತ್ತು ಬೆಲೆ ಬಾಳುವ ವಾಚ್ಗಳನ್ನು ಕದ್ದೊಯ್ದಿದ್ದ ಘಟನೆ ನಡೆದಿದ್ದು, ಅಂತರ್ ಜಿಲ್ಲಾ ಕಳವು ಆರೋಪಿಯನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ಗಾಂಧಿನಗರ ನಿವಾಸಿ ಸಂಜಯ್ ಕುಮಾರ್ (32) ಎನ್ನಲಾಗಿದ್ದು, ಈತ ಉಳಿಯಾರಗೋಳಿ ಭಾರತ್ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.
ಕಳವುಗೈದ ಮನೆಯ ಒಡತಿ ಸೌದಿ ಅರೇಬಿಯಾದಲ್ಲಿ ವಾಸವಿದ್ದು, ಅವರು ಪ್ರತಿ 2-3 ತಿಂಗಳಿಗೊಮ್ಮೆ ಕಾಫುವಿನಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದ ಖಚಿತಪಡಿಸಿಕೊಂಡ ಕಳ್ಳನು ಐದು ಸಾವಿರ ರೂ. ನಗದು ಮತ್ತು 60 ಸಾವಿರ ರೂ. ಮೌಲ್ಯದ 4 ವಾಚ್ಗಳು ಮಾತ್ರ ದೊರಕಿದ್ದು ಅವುಗಳನ್ನು ಕದ್ದೊಯ್ದು ಪರಾರಿಯಾಗಿದ್ದನು.
ಇನ್ನು ಈ ಘಟನೆಯು ಮೇ 1ರಂದು ಬೆಳಕಿಗೆ ಬಂದಿದ್ದು, ಸೌದಿ ಅರೇಬಿಯಾದಿಂದ ಬಂದ ಇಮ್ರಾನ್, ತನ್ನ ಮಾವ ಆಸಿಪ್ ಅಲಿ ಅವರಿಗೆ ಕರೆ ಮಾಡಿ ಮನೆಯ ಸಿ.ಸಿ ಕೆಮರಾ ತಿರುಗಿದ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರದಲ್ಲಿ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲನ್ನು ಒಡೆದಿರುವುದು ಬೆಳಕಿಗೆ ಬಂದಿದ್ದು, ಬಳಿಕ ಇಮ್ರಾನ್ ಸಿಸಿ ಕೆಮರಾ ಪರಿಶೀಲಿಸಿದಾಗ ಮೇ 1ರಂದು ಬೆಳಗ್ಗೆ 3ರಿಂದ 4 ಗಂಟೆಯ ನಡುವೆ ಯಾರೋ ಕಳ್ಳರು ಮನೆಯ ಬಾಗಿಲನ್ನು ಬಲವಾದ ಆಯುಧದಿಂದ ಒಡೆದು ಡೈನಿಂಗ್ ಹಾಲ್ ಮೂಲಕ ಒಳಪ್ರವೇಶಿಸಿ ರೂಂನಲ್ಲಿನ ಕಪಾಟುಗಳನ್ನು ಜಖಂಗೊಳಿಸಿ ಸೊತ್ತುಗಳನ್ನು ಕಳವು ಮಾಡಿ ಹೋಗಿರುವುದು ಗಮನಕ್ಕೆ ಬಂದಿದೆ.
ಘಟನೆಯ ಕುರಿತಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಪು ಸಿಪಿಐ ಜಯಶ್ರೀ ಮಾನೆ ಮಾರ್ಗದರ್ಶನ ಮತ್ತು ಎಸ್ಐ ತೇಜಸ್ವಿ ಅವರ ನೇತೃತ್ವದಲ್ಲಿ ಹೆಡ್ ಕಾನ್ಸ್ಟೆಬಲ್ ನಾರಾಯಣ ಮತ್ತು ಕಾನ್ಸ್ಟೆಬಲ್ ರಘು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕಳವುಗೈದ ನಾಲ್ಕು ವಾಚ್ಗಳು ಮತ್ತು ಆತನ ಬಳಿಯಿದ್ದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.