ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿಗರಿಗಾಗಿ ತುರ್ತು ಸಹಾಯವಾಣಿ ತೆರೆಯಲು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾರಾದರೂ ಕಾಶ್ಮೀರ ಪ್ರವಾಸಕ್ಕಾಗಿ ತೆರಳಿದ್ದರೆ ಅವರ ರಕ್ಷಣೆಗಾಗಿ ತುರ್ತು ಸಹಾಯವಾಣಿ ತೆರೆಯಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.
ಅಲ್ಲದೇ, ವಿಧಾನ ಸಭಾಧ್ಯಕ್ಷರ ಮಂಗಳೂರು ಕಚೇರಿಯನ್ನು 7204440444 ಮತ್ತು 7026991111 ದೂರವಾಣಿ ನಂಬರ್ ಮೂಲಕ ಸಂಪರ್ಕಿಸಬಹುದು ಎಂದು ಸ್ಪೀಕರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ, ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ ನರಮೇಧ ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿರುವ ಸ್ಪೀಕರ್ ಖಾದರ್, ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಕುಟುಂಬಕ್ಕೆ ನೀಡಲಿ, ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲಿ ಮತ್ತು ಅಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲಿ ಎಂದು ಪ್ರಾರ್ಥಿಸುವುದಾಗಿಯೂ ತಿಳಿಸಿದ್ದಾರೆ.