ಸುಳ್ಯ: ತಾಯಿಯೇ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಾಯಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಕಾವ್ಯಶ್ರೀ ಎಂಬಾಕೆ 2022ರ ಆ.16ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ತನ್ನ ವೈಯುಕ್ತಿಕ ವಿಚಾರವಾಗಿ ಹಾಲು ಬಿಸಿ ಮಾಡುವ ಪಾತ್ರೆಯನ್ನು ಗ್ಯಾಸ್ ಸ್ಟವ್ ನಿಂದ ಬಿಸಿ ಮಾಡಿ 5 ವರ್ಷ ಪ್ರಾಯದ ತನ್ನ ಮಗಳ ಎಡ ಕೆನ್ನೆಗೆ, ಬಲ ಕೈ ತೋಳಿಗೆ, ಎಡ ಕೈ ಭುಜಕ್ಕೆ, ಎಡ ಕಾಲಿನ ತೊಡೆಗೆ ಸುಟ್ಟು ಗಾಯ ಮಾಡಿದ್ದಳು.ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಅಧಿಕಾರಿ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಅವರು ಸ್ಥಳ ಭೇಟಿ ಮಾಡಿದರಲ್ಲದೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಆಗಿ ಅಪರಾಧ ಎಸಗಿರುವುದು ಸಾಬೀತಾಗಿದ್ದು, ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಮೋಹನ್ ಬಾಬು ರವರು ಆರೋಪಿ ತಾಯಿಯನ್ನು ದೋಷಿ ಎಂದು ತೀರ್ಪು ನೀಡಿ 5000 ರೂ. ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.