ಮಂಗಳೂರು: ಡೆಕೋರೇಷನ್ ಸಂಸ್ಥೆಯ ಹೊರ ರಾಜ್ಯದ ಕಾರ್ಮಿಕರ ಮೇಲೆ ಗಂಭೀರ ಹಲ್ಲೆ ನಡೆದಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.
ಕೋಟೆಕಾರು ಸಮೀಪದ ಮಡ್ಯಾರ್ ಎಂಬಲ್ಲಿ ನಿನ್ನೆ ರಾತ್ರಿ ಎಂಟು ಗಂಟೆಯ ವೇಳೆಗೆ ಚಂದನ್ ಡೆಕೋರೇಟರ್ಸ್ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ.
ಮಾಸ್ಕ್ ಧರಿಸಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ಒಂಬತ್ತು ಜನರ ತಂಡ ಸಂಸ್ಥೆಗೆ ನುಗ್ಗಿ ಒಂಬತ್ತು ಮಂದಿ ಹೊರ ರಾಜ್ಯದ ಕಾರ್ಮಿಕರ ಮೇಲೆ ಗಂಭೀರ ಹಲ್ಲೆ ನಡೆಸಿದೆ.
ಮರದ ತುಂಡಿನಿಂದ ಹಲ್ಲೆ ನಡೆಸಿದ್ದು, ಕೃತ್ಯದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳು ಉಳ್ಳಾಲ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಐರಿಸ್ ಡೆಕೋರೇಟರ್ಸ್ ಸಂಸ್ಥೆಯಿಂದ ಹೊರಬಂದಿದ್ದ ಒಂಬತ್ತು ಮಂದಿ ಕಾರ್ಮಿಕರು, ಕೆಲವು ಸಮಯದ ಹಿಂದೆ ಮಡ್ಯಾರಿನಲ್ಲಿರುವ ಚಂದನ್ ಡೆಕೋರೇಟರ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದರು.
ಇದೇ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.