ಮುಡಿಪು: ಪಾವೂರು ಗ್ರಾಮದ ನಿವೇಶನರಹಿತರಿಗೆ ಗ್ರಾಮ ಪಂಚಾಯಿತಿ ನಿವೇಶನ ನೀಡಲು ಕಾರ್ಯಪ್ರವೃತ್ತವಾಗದೇ ಇರುವುದರಿಂದ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶಗೊಂಡು ಸರ್ಕಾರಿ ಜಮೀನಿನಲ್ಲಿ ಟೆಂಟ್ ಅಳವಡಿಸಿ ಪ್ರತಿಭಟನೆ ನಡೆಸಿದರು. ಪಂಚಾಯಿತಿ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಪಾವೂರು ಗ್ರಾಮ ಪಂಚಾಯಿತಿ ಸಮೀಪ, ಸ್ವಚ್ಛ ಸಂಕೀರ್ಣದ ಬಳಿ ಎಕರೆಗಟ್ಟಲೆ ಖಾಲಿ ಜಮೀನಿದ್ದು, ಈ ಜಮೀನು ಸರ್ಕಾರಕ್ಕೆ ಸೇರಿದ್ದೆಂದು ಹಲವರು ಟಾರ್ಪಾಲಿನ ಟೆಂಟ್ ಹಾಕಿ ಸ್ಥಳದಲ್ಲೇ ಕುಳಿತರು.
ಸುಮಾರು 20 ವರ್ಷಗಳಲ್ಲಿ ಬಾಡಿಗೆ ಮನೆಯಲ್ಲೇ ವಾಸವಿದ್ದು, ಜಮೀನು ಇಲ್ಲದೆ ಮನೆ ನಿರ್ಮಾಣ ಅಸಾಧ್ಯವಾಗಿದೆ. ಪ್ರತಿದಿನದ ದುಡಿಮೆಯಿಂದ ಬದುಕುವ ನಾವು ದಿನಖರ್ಚಿಗೂ ಸಂಕಷ್ಟಪಡುತ್ತಿದ್ದು, ಈ ನಡುವೆ ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದೇವೆ. ಗ್ರಾಮದಲ್ಲಿ ಸರ್ಕಾರಿ ಜಮೀನಿದ್ದರೂ ಅದನ್ನು ಅರ್ಹರಿಗೆ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ನಿವೇಶನ ರಹಿತರು ದೂರಿದರು. ನಿವೇಶನ ರಹಿತರಿಗೆ ಶೀಘ್ರವಾಗಿ ನಿವೇಶನ ಒದಗಿಸಿಕೊಡುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಭರವಸೆ ನೀಡಿದರು.


