ಕಡಬ:ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಆಲಂಕಾರು-ಶರವೂರು ರಸ್ತೆ ಬದಿಯ ಕಲ್ಲೇರಿ ಎಂಬಲ್ಲಿ ನಡೆದಿದೆ.
ಇಲ್ಲಿನ ಪಿಡಬ್ಲ್ಯುಡಿ ಗುತ್ತಿಗೆದಾರ ಸುಧಾಕರ ಪೂಜಾರಿಯವರು ಕುಂತೂರಿನಲ್ಲಿದ್ದ ಕೃಷಿ ಜಾಗಕ್ಕೆ ಸುಧಾಕರ ಪೂಜಾರಿ ಅವರು ಬೆಳಿಗ್ಗೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದು ಅವರ ಪತ್ನಿ ಸೌಮ್ಯ ಅವರು ಮಧ್ಯಾಹ್ನ 11.30ರ ವೇಳೆಗೆ ಮನೆಗೆ ಬಾಗಿಲು ಹಾಕಿ ಮನೆ ಪಕ್ಕದಲ್ಲೇ ಇರುವ ತೋಟಕ್ಕೆ ಹೋಗಿದ್ದರು. ಅವರು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ಬಂದ ವೇಳೆ ಕಳ್ಳತನ ಆಗಿರೋದು ಗೊತ್ತಾಗಿದೆ.
ಹಂಚಿನ ಮನೆಯ ಹಿಂಬದಿ ಬಾಗಿಲಿಗೆ ಕಾಲಿನಿಂದ ಒದ್ದು ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೆಡ್ ರೂಂನ್ ಕಪಾಟಿನಲ್ಲಿದ್ದ ಕರಿಮಣಿ ಸರ, ಮಕ್ಕಳ ಚಿನ್ನದ ಉಂಗುರ, ಬೆಳ್ಳಿಯ ಕಾಲು ಚೈನ್, ಸೊಂಟದ ಚೈನ್ ಕಳವು ಗೈದಿದ್ದಾರೆ. ಅಲ್ಲದೇ ಕಪಾಟಿನಲ್ಲಿದ್ದ ರೋಲ್ಡ್ ಗೋಲ್ಡ್ ಸಹ ಕದ್ದೊಯ್ದಿದ್ದಾರೆ. ಒಟ್ಟು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವಾಗಿದೆ ಎನ್ನಲಾಗಿದೆ. ಕಳ್ಳ ಮನೆಯ ಹಿಂಬದಿ ಬಾಗಿಲಿಗೆ ಕಾಲಿನಿಂದ ಒದ್ದಿದ್ದು ಕಾಲಿನ ಶೂ ಅಚ್ಚು ಬಾಗಿಲಿನಲ್ಲಿ ಕಾಣಿಸಿಕೊಂಡಿದೆ.
ಶ್ವಾನದಳ/ಬೆರಳಚ್ಚು ತಜ್ಞರ ಆಗಮನ: ಘಟನಾ ಸ್ಥಳಕ್ಕೆ ಕಡಬ ಎಸ್.ಐ.ಗಳಾದ ಅಭಿನಂದನ್ ಎಂ.ಎಸ್., ಅಕ್ಷಯ್ ಢವಗಿ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ವೇಳೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನ ಹೆದ್ದಾರಿ ಬದಿಯಲ್ಲಿ ಕಾರೊಂದು ನಿಂತಿರವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ