ರಾಜಸ್ಥಾನ: ತನ್ನ ಚಿಕ್ಕಮ್ಮನ ಮೂಗನ್ನೇ ಸೋದರಳಿಯನೊಬ್ಬ ಜಮೀನು ವಿವಾದದಲ್ಲಿ ಕತ್ತರಿಸಿದ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಜಲೋರ್ನ ಸೈಲಾ ಮೂಲದ ಕುಕಿ ದೇವಿ ಎನ್ನಲಾಗಿದೆ.
ರಾಜಸ್ಥಾನದ ಸೈಲಾ ಗ್ರಾಮದ ಮೋಕ್ನಿ ಎಂಬಲ್ಲಿ ಕುಕಿ ದೇವಿ ಕೆಲವು ದಿನಗಳಿಂದ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದು, ತಾಯಿಗೆ ಸೇರಿದ ಜಮೀನಿನ ವಿಚಾರವಾಗಿ ಸಂಬಂಧಿಕರ ನಡುವೆ ಜಗಳಗಳು ನಡೆಯುತಿತ್ತು.
ಈ ನಿಟ್ಟಿನಲ್ಲಿ ಕುಕಿ ದೇವಿ ಡಿ. 17 ಮಂಗಳವಾರದಂದು ತನ್ನ ಸಹೋದರ ರಮೇಶ್ ಜೊತೆಯಾಗಿ ಜಮೀನಿನ ವಿವಾದವನ್ನು ಬಗೆಹರಿಸಿ ಬರೋಣ ಎಂದು ಮೊಕನಿ ಗ್ರಾಮಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಸೋದರಳಿಯ ಓಂ ಪ್ರಕಾಶ್ ಹಾಗೂ ಸಂಬಂಧಿಕರು ಕುಕಿ ದೇವಿಯ ಬಳಿ ಗಲಾಟೆ ಶುರು ಮಾಡಿದ್ದು, ಮಾತಿಗೆ ಮಾತು ಬೆಳೆದು ಗಂಭೀರ ಹಂತಕ್ಕೆ ತಲುಪಿ ಓಂ ಪ್ರಕಾಶ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಕುಕಿ ದೇವಿಯ ಮೂಗನ್ನು ಕತ್ತರಿಸಿದ್ದಾನೆ. ಈ ವೇಳೆ ಮೂಗಿನ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದ್ದು ರಕ್ತ ಹರಿಯತೊಡಗಿದೆ, ಕೂಡಲೇ ಕುಕಿ ದೇವಿ ತುಂಡಾದ ಮೂಗನ್ನು ಹೆಕ್ಕಿ ತನ್ನ ಬ್ಯಾಗ್ ಒಳಗೆ ಇಟ್ಟು ಪಾಲಿಯಲ್ಲಿರುವ ಬಂಗಾರ್ ಆಸ್ಪತ್ರೆಗೆ ಓಡೋಡಿ ಬಂದಿದ್ದಾಳೆ ಎನ್ನಲಾಗಿದೆ.
ಕುಕ್ಕಿ ದೇವಿ ವೈದ್ಯರಿಗೆ ತನ್ನ ಬ್ಯಾಗಿನ ಒಳಗಿಂದ ಮೂಗನ್ನು ತೆಗೆದು ತೋರಿಸಿದ್ದು, ಬಂಗಾರ್ ಆಸ್ಪತ್ರೆಯ ಜುಗಲ್ ಮಹೇಶ್ವರಿ ಈ ದೃಶ್ಯವನ್ನೂ ಕಂಡು ಗಾಬರಿಯಾಗಿದ್ದಾರೆ. ನಂತರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮೂಗು ತೀವ್ರವಾಗಿ ಕತ್ತರಿಸಲ್ಪಟ್ಟಿದೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರ ಅದನ್ನು ಮರು ಜೋಡಿಸಲು ಸಾಧ್ಯ ಎಂದು ಹೇಳಿ ಜೋಧ್ಪುರದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ಕುಕಿ ದೇವಿಗೆ ಜೋಧ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದು, ಆರೋಪಿಯಾದ ಓಂ ಪ್ರಕಾಶ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಘಟನೆಯ ಕುರಿತಂತೆ ವಿಚಾರಣೆ ನಡೆಸುತ್ತಿದ್ದಾರೆ.