ಕಾರ್ಕಳ: ಮನೆ ಯಜಮಾನನ ಗೂಗಲ್ ಪೇ ನಿಂದ 9 ಲಕ್ಷ ರೂವನ್ನು ತನ್ನ ಅಕೌಂಟ್ ಗೆ ಟ್ರನ್ಸ್ ಫರ್ ಮಾಡಿ ಹೋಂ ನರ್ಸ್ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಡಿ. 14ರಂದು ಮುಂಬಯಿ ದಹಿಸರ್ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕುಕ್ಕುಂದೂರಿನ ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಮತ್ತು ತೆಳ್ಳಾರು ನಿವಾಸಿ ರತ್ನಾಕರ್ (50) ಎನ್ನಲಾಗಿದೆ.
ಅಲೈಟ್ಕೇರ್ ಎಂಬ ಸಂಸ್ಥೆಯ ರತ್ನಾಕರ್ನಿಂದ 1ನೇ ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಮನೆಗೆ ಕೆಲಸಕ್ಕೆ ಬಂದಿದ್ದು, ಕೆಲಸ ಮಾಡುತ್ತಲೇ ನಂಬಿಕೆಯನ್ನು ಕೂಡ ಗಳಿಸಿದ್ದ. ಕಸಬಾ ಗ್ರಾಮದ ಶಶಿಧರ್ (75) ಅವರನ್ನ ಕೇರ್ ಮಾಡುತ್ತಿದ್ದ ಕಾರ್ತಿಕ್ ಶೆಟ್ಟಿ, ಶಶಿಧರ್ ಅವರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು, ಬೇರೆಯವರಿಗೆ ಹಣ ವರ್ಗಾವಣೆ ಮಾಡುವ ವೇಳೆ ಗೂಗಲ್ ಪೇ ಪಿನ್ ನಂಬರ್ ಗಮನಿಸಿದ್ದ ಎನ್ನಲಾಗಿದೆ. ನಂತರದಲ್ಲಿ ಆತ ತನ್ನ ಅಕೌಂಟ್ ಗೆ ಹಂತಹಂತವಾಗಿ ಲಕ್ಷಾಂತರ ರೂ. ಹಣವನ್ನು ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡು ನಂಬಿಕೆ ದ್ರೋಹ ಮಾಡಿದ್ದರು ಎಂದು ಶಶಿಧರ್ ಅವರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದರು.
ಈ ದೂರಿನ ನಿಟ್ಟಿನಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಕರಣದ ಆರೋಪಿಗಳು ಮುಂಬಯಿಯಲ್ಲಿ ತಲೆಮರೆಸಿಕೊಂಡ ಮಾಹಿತಿ ಪಡೆದ ಪೊಲೀಸರು, ಅವರನ್ನು ಅಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


