ಸುಳ್ಯ; ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದಿದೆ. ಸುಳ್ಯದ ಅಡ್ಕಾರಿನ ರಾಘವ ಆಚಾರ್ಯ (65 ) ಮೃತ ದುರ್ದೈವಿ.
ರಾಘವ ಆಚಾರ್ಯ ಅವರು ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ನ.26ರಂದು ಸುಳ್ಯ ತಾಲೂಕು ಕಚೇರಿಗೆ ಬಂದಿದ್ದರು. ಅರ್ಜಿ ಸ್ವೀಕರಿಸಿದ ಅಲ್ಲಿನ ಸಿಬ್ಬಂದಿ ಒಟಿಪಿ ಬರುವವರೆಗೆ ಕುಳಿತುಕೊಳ್ಳಲು ಹೇಳಿದ್ದರು.
ಸ್ವಲ್ಪ ಹೊತ್ತಲ್ಲಿ ಒಟಿಪಿ ಬಂದಾಗ ಸಿಬ್ಬಂದಿಯು ಕೌಂಟರ್ ಬಳಿಗೆ ರಾಘವ ಆಚಾರ್ಯ ಅವರನ್ನು ಕರೆದಿದ್ದರು. ಕುಳಿತಲ್ಲಿಂದ ಎದ್ದು ಕೌಂಟರ್ ಬಳಿಗೆ ಬರುತ್ತಿದ್ದಂತೆ ಹಿರಿಯ ವ್ಯಕ್ತಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಅಲ್ಲಿನ ಸಿಬ್ಬಂದಿ ಅವರ ಮುಖಕ್ಕೆ ನೀರು ಹಾಕಿ ಎತ್ತಿ ಬೆಂಚಲ್ಲಿ ಮಲಗಿಸಿ, ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಅಂಬ್ಯುಲೆನ್ಸ್ ಬರುವಷ್ಟರಲ್ಲಿ ಕೊನೆಯುಸಿರೆಳೆದಿದ್ದರೆನ್ನಲಾಗಿದೆ. ಅಂಬ್ಯುಲೆನ್ಸ್ನಲ್ಲಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.