ಪುತ್ತೂರು: ಇಲ್ಲಿನ ಕಾರ್ಮಿಕನೋರ್ವ ಮೇಸ್ತ್ರಿಗೆ ಸಹಾಯಕನಾಗಿ ತೆರಳಿದ್ದ ಸಂದರ್ಭದಲ್ಲಿ ಆರೋಗ್ಯದಲ್ಲಿ ವ್ಯತ್ಯಾಯ ಉಂಟಾಗಿ ಅಸುನೀಗಿದ ಘಟನೆ ನಡೆದಿದ್ದು, ಈ ಕುರಿತಂತೆ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣ ದೂರು ದಾಖಲಾಗಿದೆ.
ಮೃತಪಟ್ಟ ವ್ಯಕ್ತಿ ಚಿಕ್ಕಮುಟ್ನೂರು ಗ್ರಾಮದ ಸಾಲ್ಮರದ ಕೆರೆಮೂಲೆ ನಿವಾಸಿ ಶಿವಪ್ಪ. ನ. 16ರಂದು ಬೆಳಗ್ಗೆ ತಾವ್ರೋ ವುಡ್ ಇಂಡಸ್ಟ್ರೀಸ್ ಮಾಲಕ ಹೆನ್ರಿ ತಾವ್ರೊ ಅವರು ಶಿವಪ್ಪ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದು, ನಂತರದಲ್ಲಿ ಅವರ ಮೃತದೇಹವನ್ನು ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಂಡು ಬಂದು ಶಿವಪ್ಪ ಅವರ ಮನೆಯ ಬಳಿ ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ.
ಇದನ್ನು ನೋಡಿದಂತಹ ಶಿವಪ್ಪ ಅವರ ಪತ್ನಿ ಮತ್ತು ಮಗಳು ಅವರು ಮಾತನಾಡದೇ ಇದ್ದಾಗ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದರು. ಆರೋಗ್ಯದಿಂದಿದ್ದ ನನ್ನ ಮಾವನನ್ನು ಕೆಲಸಕ್ಕೆಂದು ಕರೆದುಕೊಂಡು ಹೋದಾಗ ಅವರ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರಿದ ಹೆನ್ರಿ ತಾವ್ರೊ ಬಳಿಕ ಅಮಾನವೀಯವಾಗಿ ಪಿಕಪ್ನಲ್ಲಿ ತಂದು ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ. ಈ ಮೂಲಕ ಅವರು ದಲಿತ ದೌರ್ಜನ್ಯ ಎಸಗಿದ್ದಾರೆ ಎಂದು ಶಿವಪ್ಪ ಅವರ ಅಳಿಯ ಶಶಿ ಕೆರೆಮೂಲೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಹೆನ್ರಿ ತಾವ್ರೊ, ಸ್ಟ್ಯಾನಿ ಮೇಸ್ತ್ರಿ ಹಾಗೂ ಇನ್ನೋರ್ವನ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ದಾರೆ.
ದಲಿತ ಸಂಘಟನೆಗಳು ಪ್ರಕರಣದ ಕುರಿತಂತೆ ಸೋಮವಾರ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ.