ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯ ಹಿಂಬದಿಯಲ್ಲಿರುವ ಗುಜರಾತಿ ಸಮುದಾಯದ ಶ್ವೇತಾಂಬರ ಮೂರ್ತಿ ಪೂಜಕ್ ಜೈನ ಮಂದಿರದ ಮೂರ್ತಿಗಳಿಗೆ ಹಾಕಿದ್ದ ಚಿನ್ನದ ಸರಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಈ ಘಟನೆಯು ಮುಂಜಾವು 4.30ರ ಸುಮಾರಿಗೆ ನಡೆದಿದ್ದು, ಮನೆಮಂದಿ ಮಲಗಿದ್ದಾಗ ಜೈನಮಂದಿರಕ್ಕೆ ಯಾರೋ ಕಳ್ಳರು ಬಂದಿರುವ ಬಗ್ಗೆ ಅರ್ಚಕರ ಪತ್ನಿ ತಿಳಿಸಿದಂತೆ ಅರ್ಚಕರು ಮತ್ತು ಅವರ ಪುತ್ರ ಮನೆಯಿಂದ ಹೊರಬಂದಾಗ ಕಳ್ಳರು ರಸ್ತೆಬದಿ ಹಣದಡಬ್ಬವನ್ನು ಒಡೆಯುವ ಸದ್ದು ಕೇಳಿಸಿತು. ಆದರೆ ಅರ್ಚಕರು ಅಲ್ಲಿಗೆ ಹೋಗಿ ನೋಡಿದಾಗ ಕಳ್ಳರು ಡಬ್ಬವನ್ನು ಅಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಷ್ಟೇಅಲ್ಲದೆ ಕಳ್ಳರು ಜೈನಮಂದಿರದ ಬಾಗಿಲಿನ ಚಿಲಕವನ್ನು ಮುರಿದು ಮಂದಿರದ 5 ಮೂರ್ತಿಗಳಿಗೆ ಹಾಕಿದ್ದ 55 ಗ್ರಾಂ ತೂಕದ ಒಟ್ಟು ಅಂದಾಜು 2.50 ಲ.ರೂ. ಮೌಲ್ಯದ 5 ಚಿನ್ನದ ಸರಗಳನ್ನು ಕಳವುಗೈದಿರುವುದು ಅರ್ಚಕರು ಜೈನಮಂದಿರಕ್ಕೆ ಬಂದು ನೋಡಿದಾಗ ಗಮನಕ್ಕೆ ಬಂದಿದೆ.
ಈ ಕುರಿತಂರೆ ಮಂಗಳೂರು ನಗರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.