ಬಂಟ್ವಾಳ: ವಿಹಿಂಪ ಮುಖಂಡ ಶರಣ್ ಪಂಪುವೆಲ್ ಅವರಿಗೆ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಸವಾಲು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಶರಣ್ ಪಂಪವೆಲ್ ಬಿ ಸಿ ರೋಡಿಗೆ ಆಗಮಿಸಿದ್ದಾರೆ. ಹೀಗಾಗಿ ಬಿ.ಸಿ.ರೋಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇನ್ನು ಸಹಸ್ರಾರು ಸಂಖ್ಯೆ ಪೊಲೀಸರು ಲೆಕ್ಕಿಸದೇ ಹಿಂದೂ ಕಾರ್ಯಕರ್ತರು ಆಗಮಿಸಿರೋದರಿಂದ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.ಈ ಕುರಿತು ಹೇಳಿಕೆ ನೀಡಿದ ಶರಣ್ ಪಂಪ್ ವೆಲ್ ಹಿಂದೂ ಸಂಘಟನೆಗೆ ಇಂತಹ ಸವಾಲು ಹೊಸತೇನಲ್ಲ. ಆದರೆ ಆತನ ಸವಾಲಿಗೆ ಉತ್ತರ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಆತ ಹೇಳಿದಂತೆ ಅವಶ್ಯಕತೆ ಬಿದ್ದರೆ ಮಸೀದಿಗೆ ಹೋಗುವುದಕ್ಕೂ ಸಿದ್ಧರಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ಮೂಲಕ ಹಿಂದುತ್ವದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
ರ್ಯಾಲಿ-ಪ್ರತಿ ರ್ಯಾಲಿ ನಡೆಸುವ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ಮೆಸೇಜ್ ಮತ್ತು ಚಾಟ್ಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ಈಗಾಗಲೇ ನಿಯೋಜಿಸಲಾದೆ ಅಲ್ಲದೆ ಉನ್ನತ ಪೊಲೀಸ್ ಅಧಿಕಾರಿಗಳು ಬಿ.ಸಿ.ರೋಡ್ಗೆ ಆಗಮಿಸಿದ್ದಾರೆ.ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುವ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಪುರಸಭಾ ಸದಸ್ಯ ಹಸೈನಾರ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.
ಏನಿದು ಸವಾಲು?
ಈದ್ ಮಿಲಾದ್ ರ್ಯಾಲಿಯ ಮೇಲೆ ದಾಳಿ ಮಾಡಿದರೆ ಏನಾಗಬಹುದು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ಸವಾಲು ಹಾಕಿರುವ ವಾಯ್ಸ್ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸೆ. 16ರಂದು ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯುವ ಮಿಲಾದ್ ರ್ಯಾಲಿ ಸಂದರ್ಭ ಬಂದು ನಿಲ್ಲುವಂತೆ ಸವಾಲು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದು ವೈರಲ್ ಆಗಿದ್ದು, ಈ ಬಗ್ಗೆ ಹಿಂದೂ ನಾಯಕರು, ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಕೋಮು ಸೌಹಾರ್ದ ಹಾಳುಗೆಡುವುವ ಉದ್ದೇಶ ದಿಂದಲೇ ಈ ರೀತಿಯ ಸವಾಲಿನ ಆಡಿಯೋ ಸಂದೇಶ ಹಾಕಲಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿವೆ.


