ಉಡುಪಿ: ಸೈಬರ್ ಲೂಟಿಕೋರರು ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಉಡುಪಿಯ ವ್ಯಕ್ತಿಯೊಬ್ಬರಿಗೆ ಕರೆ ಹಾಗೂ ಸಂದೇಶ ಕಳುಹಿಸಿದ್ದು, ವ್ಯಕ್ತಿಯ ಸಮಯಪ್ರಜ್ಞೆಯಿಂದ ಅವರು ಮೋಸಕ್ಕೆ ಗುರಿಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.
ಸೈಬರ್ ಲೂಟಿಕೋರರು ಕಳುಹಿಸಿದ್ದ ಸಂದೇಶದಲ್ಲಿನ ಲಿಂಕ್ ಓಪನ್ ಮಾಡಿದಾಗ ಲಕ್ಷಾಂತರ ರೂ.ಮಂಗ ಮಾಯವಾಗುವ ಸಾಧ್ಯತೆಗಳಿತ್ತು.
ಆ.8ರಂದು ಉಡುಪಿಯ ನ್ಯಾಯವಾದಿಯೊಬ್ಬರಿಗೆ 09341427331 ಸಂಖ್ಯೆಯಿಂದ ವ್ಯಕ್ತಿಯೊಬ್ಬರು ಬೆಳಗ್ಗೆ ಕರೆ ಮಾಡಿ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಕಚೇರಿ ನೋಯಿಡಾದಿಂದ ಮಾತನಾಡುವುದು. ನಿಮ್ಮ ಕ್ರೆಡಿಟ್ ಲಿಮಿಟ್ ಅನ್ನು 5 ಲ.ರೂ. ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿಚಾರಕ್ಕಾಗಿ ನಿಮಗೆ ಬ್ಯಾಂಕಿನಿಂದ ಒಂದು ಲಿಂಕ್ ಅನ್ನು ಕಳುಹಿಸಿದ್ದೇವೆ’ ಎಂದು ಹಿಂದಿಯಲ್ಲಿ ಆತ್ಮೀಯವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ.
ಈ ಕರೆಯಿಂದ ಸಂಶಯಗೊಂಡ ನ್ಯಾಯವಾದಿ, ಎಸ್.ಬಿ.ಐ. ಕೇಂದ್ರ ಕಚೇರಿ ಇರುವುದು ಮುಂಬಯಿಯಲ್ಲಿ, ನೋಯಿಡಾದಲ್ಲಿ ಯಾವುದೇ ಕೇಂದ್ರ ಕಚೇರಿ ಇರುವುದಿಲ್ಲ ಎಂದು ತಿಳಿದಿದ್ದಾರೆ. ಕರೆ ಮಾಡಿದ ವ್ಯಕ್ತಿಯು ನ್ಯಾಯವಾದಿಯ ಹೆಸರು, ತಂದೆ ಹೆಸರು, ಸ್ಟೇಟ್ ಬ್ಯಾಂಕಿನ ಖಾತೆ ಇರುವ ಶಾಖೆಯ ಹೆಸರನ್ನು ಸ್ಪಷ್ಟವಾಗಿ ಹೇಳಿದ್ದು, ಇತ್ತೀಚೆಗೆ ಕ್ರೆಡಿಟ್ ಕಾರ್ಡ್ನಿಂದ ಖರೀದಿ ಮಾಡಿದ ವಿವರಗಳನ್ನು ಸಹ ತಿಳಿಸಿದ್ದಾರೆ. ಇದರೊಂದಿಗೆ ನಿಮ್ಮ ಖಾತೆ ಇರುವ ಶಾಖೆಯಿಂದ ನೀವು ಮಾತ್ರ ಸೆಲೆಕ್ಟ್ ಆಗಿದ್ದೀರಿ. 1 ವರ್ಷದಲ್ಲಿ 5 ಲ.ರೂ. ಸಂಪೂರ್ಣ ಉಪಯೋಗಿಸಿದರೆ ಯಾವುದೇ ಬಡ್ಡಿ ಇರುವುದಿಲ್ಲ ಮತ್ತು ನಿಮಗೆ ಈ ಸೌಲಭ್ಯ ಬೇಕಾದರೆ ಕಳುಹಿಸಿದ ಲಿಂಕ್ ಅನ್ನು ಓಪನ್ ಮಾಡಿ ಅದರ ಹಾರ್ಡ್ ಕಾಪಿಯನ್ನು ನಿಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಯ ಶಾಖಾ ವ್ಯವಸ್ಥಾಪಕರಲ್ಲಿ ನೀಡಿ ಎಂದು ತಿಳಿಸಿದರು. ಅನಂತರ ನ್ಯಾಯವಾದಿಗೆ ಕರೆ ಮಾಡಿದವರ ವ್ಯಕ್ತಿಯ ಹುದ್ದೆ, ಎಂಪ್ಲಾಯಿ ಕೋಡ್ ಹೆಸರು ಕೇಳಿದಾಗ ತನ್ನ ಹೆಸರು ಅಜಿತ್ ಅಗರ್ವಾಲ್ ಎಂದು ಹೇಳಿ ಫೋನ್ ಕರೆಯನ್ನು ಮುಕ್ತಾಯಗೊಳಿಸಿದ ಎನ್ನಲಾಗಿದೆ.
ಈ ಬಗ್ಗೆ ನ್ಯಾಯವಾದಿಯು ಖಾತೆಯಿರುವ ಉಡುಪಿಯ ಎಸ್.ಬಿ.ಐ. ಶಾಖೆಗೆ ಫೋನ್ ಮಾಡಿ ಕೇಳಿದಾಗ ಇಂತಹ ಯಾವುದೇ ತರಹ ಕ್ರೆಡಿಟ್ ಕಾರ್ಡ್ನ ಮಿತಿಯನ್ನು ಹೆಚ್ಚುವರಿ ಮಾಡುವ ಸೇವೆಗಳಿಲ್ಲ. ಯಾವುದೇ ಕಾರಣಕ್ಕೂ ಲಿಂಕ್ ಅನ್ನು ಓಪನ್ ಮಾಡಬೇಡಿ ಎಂದು ಸೂಚನೆ ಕೊಟ್ಟರು. ಒಂದು ವೇಳೆ ಲಿಂಕ್ ಅನ್ನು ಓಪನ್ ಮಾಡಿದರೆ ಲಕ್ಷಾಂತರ ರೂ.ಸೈಬರ್ ಕಳ್ಳರ ಪಾಲಾಗುತ್ತಿತ್ತು. ಇಂತಹ ಕರೆಗಳು, ಲಿಂಕ್ಗಳೂ ಬಂದಾಗ ಯಾವುದೇ ಕಾರಣಕ್ಕೂ ಲಿಂಕ್ ಅನ್ನು ಓಪನ್ ಮಾಡದೆ, ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತಿಳಿಸಬೇಕು ಎಂದು ನ್ಯಾಯವಾದಿ ಆನಂದ ಮಾಡಿವಾಳ ತಿಳಿಸಿದ್ದಾರೆ.