ಹೊಸದಿಲ್ಲಿ: ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್ ನ ಭಾರತೀಯ ಸೇನಾ ಕ್ಯಾಂಪ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅಗ್ನಿ ಕೆನ್ನಾಲಿಗೆಯಿಂದ ಇತರರನ್ನು ರಕ್ಷಿಸುವ ವೇಳೆ ಹುತಾತ್ಮರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ತನ್ನ ಮಗ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಅವರು ಪ್ರದಾನಿಸಿದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸೊಸೆ ಸ್ಮೃತಿ ತನ್ನೊಂದಿಗೆ ಕೊಂಡೊಯ್ದಿದ್ದಾರೆ ಎಂದು ಅಂಶುಮನ್ ತಂದೆ ಆರೋಪಿಸಿದ್ದಾರೆ.
ಅಂಶುಮಾನ್ ತಂದೆ ರವಿಪ್ರತಾಪ್ ಸಿಂಗ್ ಸುದ್ದಿವಾಹಿನಿಯೊಂದಿಗೆ ಮಾತನಾಡಿ, “ತಮ್ಮ ಪುತ್ರನಿಗೆ ಮರಣೋತ್ತರವಾಗಿ ಸರ್ಕಾರ ನೀಡಿದ ಕೀರ್ತಿ ಚಕ್ರವನ್ನು ಅವರ ಸೊಸೆ ಸ್ಮೃತಿ ಅಂಶುಮಾನ್ ಫೋಟೋ ಆಲ್ಬಮ್, ಬಟ್ಟೆ ಮತ್ತು ಇತರ ನೆನಪುಗಳೊಂದಿಗೆ ಗುರುದಾಸ್ಪುರದ ಮನೆಗೆ ತೆಗೆದುಕೊಂಡು ಹೋದರು. ನಾವು ಅಂಶುಮಾನ್ ಅವರನ್ನು ಸ್ಮೃತಿಯೊಂದಿಗೆ ವಿವಾಹ ಮಾಡಿದ್ದೆವು. ಮದುವೆಯ ನಂತರ, ಅವರು ನನ್ನ ಮಗಳೊಂದಿಗೆ ನೋಯ್ಡಾದಲ್ಲಿ ಇರಲು ಪ್ರಾರಂಭಿಸಿದರು. ಜುಲೈ 19, 2023 ರಂದು, ಅಂಶುಮಾನ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂದಾಗ, ನಾನು ಅವರನ್ನು ಲಕ್ನೋಗೆ ಕರೆದಿದ್ದೆ, ಆದರೆ ಅಂತ್ಯಕ್ರಿಯೆಯ ನಂತರ ಅವಳು (ಸ್ಮೃತಿ) ಗುರುದಾಸ್ಪುರಕ್ಕೆ ಹಿಂತಿರುಗಿದಳು” ಎಂದು ರವಿ ಪ್ರತಾಪ್ ಸಿಂಗ್ ತಿಳಿಸಿದರು.
ಇನ್ನು ಅಂಶುಮಾನ್ ಅವರಿಗೆ ಕೀರ್ತಿ ಚಕ್ರ ನೀಡಿದಾಗ, ಆತನ ತಾಯಿ ಮತ್ತು ಸ್ಮೃತಿ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರ ನೀಡಿ ಗೌರವಿಸಿದರು, ಆದರೆ ನನಗೆ ಅದನ್ನು ಒಮ್ಮೆಯೂ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಕ್ಯಾಪ್ಟನ್ ಅಂಶುಮಾನ್ ಸಿಂಗ್ ತಾಯಿ ಮಂಜು, “ರಾಷ್ಟ್ರಪತಿ ಭವನದಲ್ಲಿ ಸ್ಮೃತಿ ಅವರೊಂದಿಗೆ ಜುಲೈ 5 ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆವು. ನಾವು ಕಾರ್ಯಕ್ರಮದಿಂದ ಹೊರಡುವಾಗ, ಸೇನಾಧಿಕಾರಿಗಳ ಹೇಳಿಕೆಯ ಮೇರೆಗೆ ನಾನು ಫೋಟೋಗಾಗಿ ಕೀರ್ತಿ ಚಕ್ರವನ್ನು ಹಿಡಿದಿದ್ದೇನೆ. ಆದರೆ ಅದರ ನಂತರ, ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡಳು” ಎಂದು ಆರೋಪಿಸಿದರು.