
ಮಂಗಳೂರು; ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹ ಕೊಂಡೊಯ್ಯಲು ಹಣವಿಲ್ಲದೇ ಕುಟುಂಬಸ್ಥರು ಕಣ್ಣೀರಿಡುತ್ತಿದ್ದದ್ದು ಗೊತ್ತಾಗಿ ಅವರಿಗೆ ಆರ್ಥಿಕ ಸಹಾಯ ಮಾಡಿ ಸ್ಪೀಕರ್ ಯು ಟಿ ಖಾದರ್ ಮಾನವೀಯತೆ ಮೆರೆದಿದ್ದಾರೆ.
ಕೆಎಸ್ ಆರ್ ಪಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಕಾರವಾರ ಬವಲ್ ಗ್ರಾಮದ ಮೂಲದ ಗೋವಿಂದ ಟಿ.ಸಾಲಿ ಎಂಬವರ ಪುತ್ರಿ ವಿದ್ಯಾ ವಿಕ್ರಮ್ ಅಂಬಿಗ್ (33) ಕಾಮಾಲೆ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಫಲಿಸದೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಇವರ ಕುಟುಂಬದವರು ಸಂಕಷ್ಟದಲ್ಲಿದ್ದರು. ಈ ಬಗ್ಗೆ ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ನಝರ್ ಷಾ ಪಟ್ಟೋರಿ ಅವರು ಖಾದರ್ ಅವರಿಗೆ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಅವರು ಆಸ್ಪತ್ರೆ ಚಿಕಿತ್ಸೆ ಹಣವನ್ನು ಭರಿಸಿದ್ದಾರೆ.ಬಳಿಕ ಮೃತದೇಹವನ್ನು ಕಾರವಾರದ ಅವರಿಗೆ ಹುಟ್ಟೂರಿಗೆ ಕೊಂಡೊಯ್ಯಲು ನಮ್ಮೂರ ಧ್ವನಿ ಆಂಬ್ಯುಲೆನ್ಸ್ ಮೂಲಕ ಉಚಿತ ವ್ಯವಸ್ಥೆ ಮಾಡಿಸಿದ್ದಾರೆ.
ಗೋವಿಂದ ಅವರು ಕೆ ಎಸ್ ಆರ್ ಪಿ ಬೆಟಾಲಿಯನ್ ನಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದಾಗಿ ಕೆಲಸಕ್ಕೆ ತೆರಳಲಾಗದೆ ಕಳೆದ 5 ವರ್ಷಗಳಿಂದ ಕೊಣಾಜೆಯ ನಡುಪದವಿನ ಸಣ್ಣ ಬಾಡಿಗೆ ಮನೆಯಲ್ಲಿ ನಾಲ್ವರು ಪುತ್ರಿಯರೊಂದಿಗೆ ವಾಸವಾಗಿದ್ದರು. ಇದರಲ್ಲಿ ಇಬ್ಬರು ಪುತ್ರಿಯರಿಗೆ ವಿವಾಹವಾಗಿದ್ದರೂ, ತಂದೆಯ ಜತೆಗೆ ವಾಸವಾಗಿದ್ದರು. ಇದರಲ್ಲಿ ಹಿರಿಯ ಪುತ್ರಿ ಕಾಮಾಲೆ ರೋಗಕ್ಕೆ ತುತ್ತಾಗಿ , ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಸಾಧ್ಯವಾಗದೆ ಕುಟುಂಬಸ್ಥರು ಕಣ್ಣೀರಿಡುತ್ತಿದ್ದರು. ಮೃತ ಮಹಿಳೆ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಅಗಲಿದ್ದಾರೆ.


