ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿಯ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಗೆ ಶುಕ್ರವಾರದಂದು ರಾತ್ರಿ ನುಗ್ಗಿದ್ದ ದರೋಡೆಕೋರರು ಕೋಟ್ಯಂತರ ರೂಪಾಯಿ ದೋಚುವ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಉದ್ಯಮಿಯ ಮನೆಯಲ್ಲಿ ಐದಾರು ಕೋಟಿ ರೂಪಾಯಿ ನಗದು ರೂಪದಲ್ಲೇ ಇರಬಹುದು ಎಂಬ ಲೆಕ್ಕಾಚಾರದಿಂದ ಬಂದಿದ್ದ ದರೋಡೆಕೋರರು ಅದನ್ನು ಹೊತ್ತೂಯ್ಯಲು ಗೋಣಿ ಚೀಲವನ್ನೇ ತಂದಿದ್ದರು! ಆದರೆ ಅವರ ನಿರೀಕ್ಷೆಯಷ್ಟು ಹಣ ಸಿಗಲಿಲ್ಲ. ದರೋಡೆಕೋರರು ಮನೆಯವರಲ್ಲಿ ಪದೇ ಪದೆ ಹಣ ಎಲ್ಲಿದೆ ಎಂದು ಪ್ರಶ್ನಿಸುತ್ತಾ ಮನೆಯೆಲ್ಲ ಜಾಲಾಡಿದ್ದಾರೆ. ಹಾಸಿಗೆಗಳ ಅಡಿಯಲ್ಲಿಯೂ ಹುಡು ಕಾಡಿದ್ದಾರೆ. ಭಾರೀ ಹಣ ಸಂಗ್ರಹಿಸಿಟ್ಟಿದ್ದಾರೆ ಎಂಬ ಮಾಹಿತಿ ದರೋಡೆಕೋರರಿಗೆ ಲಭಿಸಿದೆ. ಕೃತ್ಯದಲ್ಲಿ ಸ್ಥಳೀಯ ಸಂಪರ್ಕ ಇರುವ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿರುವ ಸಿಸಿಟಿವಿಯಲ್ಲಿ ದರೋಡೆಕೋರರ ಕೃತ್ಯದ ಕೆಲವು ದೃಶ್ಯಗಳು ದಾಖಲಾಗಿವೆ. ಅಲ್ಲದೆ ದರೋಡೆಕೋರರ ವಾಹನದ ಚಿತ್ರ ರಸ್ತೆ ಬದಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಅದನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಅದು ತನಿಖೆಗೆ ಹೆಚ್ಚು ಪ್ರಯೋಜನವಾಗಿಲ್ಲ.