ಮಂಗಳೂರು: ’ಮೀನುಗಾರರು ಹಿಂದುತ್ವದ ಸೈನಿಕರು ಕೂಡ. ರಾಷ್ಟ್ರದ ಬಗ್ಗೆ ಅತೀವ ಪ್ರೇಮ ಇಟ್ಟುಕೊಂಡ ಸಮುದಾಯವಿದು. ಬಿಜೆಪಿ ಆಲೋಚನಾ ಪ್ರಕ್ರಿಯೆಯಲ್ಲಿ ಮೀನುಗಾರರ ಸಮುದಾಯವೂ ದೊಡ್ಡ ಅಂಗ. ಪಕ್ಷವನ್ನು ಕಟ್ಟುವಲ್ಲಿ ಅವರ ಕೊಡುಗೆ ಮಹತ್ತರವಾದುದು’ ಎಂದು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪಕ್ಷದ ಮೀನುಗಾರರ ಪ್ರಕೋಷ್ಠ ವತಿಯಿಂದ ಭಾನುವಾರದಂದು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
‘ದೇಶದ ನೌಕಾಪಡೆ ಬಲಗೊಳ್ಳುವ ಮೊದಲೇ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗೆ ಕೆಲಸ ಮಾಡಿದ್ದಾರೆ. ಮೀನುಗಾರರದು ಸೈನಿಕನ ಮಾನಸಿಕತೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಂಘ ಪರಿವಾರದ ಸಂಘಟನೆಗ ಶಕ್ತಿ ನೀಡಿದ್ದು ಮೀನುಗಾರರು. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಆರಂಭಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಬಂದ 70 ವರ್ಷದ ಬಳಿಕ ಮೀನುಗಾರ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ’ ಎಂದರು.
ಮುಖಂಡ ರಾಮಚಂದರ್ ಬೈಕಂಪಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷದ ಜಿಲ್ಲಾ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, ಸಹ ಸಂಚಾಲಕ ಯಶವಂತ ಅಮೀನ್ ಭಾಗವಹಿಸಿದ್ದರು.
‘ರಾಜ್ಯದ ರಾಜಕೀಯದಲ್ಲಿ ಕರಾವಳಿಯ ಕಡೆಗಣನೆ’: ‘ರಾಜಕೀಯ ನಿರ್ಣಯಗಳು ಮತಬ್ಯಾಂಕ್ ಆಧಾರದಲ್ಲಿ ಹಾಗೂ ಪ್ರಬಲ ಸಮುದಾಯಗಳ ಅಪೇಕ್ಷೆಗೆ ಅನುಗುಣವಾಗಿಯೇ ಕೈಗೊಳ್ಳಲಾಗುತ್ತಿದೆ. ಕರಾವಳಿ ಕರ್ನಾಟಕ ಅವರ ಕಾರ್ಯಸೂಚಿಗೆ ಹೊಂದಿಕೆ ಆಗುವುದಿಲ್ಲ. ಹಾಗಾಗಿ ಕರಾವಳಿಯ 19ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕರಾವಳಿಯವರು ಆರ್ಥಿಕವಾಗಿ ಬಲಾಢ್ಯರಾದರೆ ಮಾತ್ರ ಈ ಮಾನಸಿಕತೆಯನ್ನು ಬದಲಾಯಿಸಬಹುದು. ಇದನ್ನು ಗಟ್ಟಿ ಧ್ವನಿಯಲ್ಲಿ ಹೇಳಲು ಮೀನುಗಾರರ ಸಹಕಾರ ಬೇಕು’ ಎಂದು ಬೃಜೇಶ್ ಚೌಟ ಹೇಳಿದರು.
ಮೀನು ಮಾರಾಟ– ಅನ್ಯರಿಗೆ ಅವಕಾಶ ಬೇಡ: ಮೇಯರ್: ‘ಮೀನುಗಾರರು ಕಷ್ಟಪಟ್ಟು ತರುವ ಮೀನನ್ನು ಮಾರಾಟ ಮಾಡುವ ಸಮುದಾಯ ಯಾವುದು ಎಂದು ಎಲ್ಲರಿಗೂ ಗೊತ್ತಿದೆ. ನಾವು ಸ್ವಾವಲಂಬಿಯಾಗಬೇಕು. ನಾವೇ ಅದರ ವ್ಯಾಪಾರ ಮಾಡಬೇಕು. ಅನ್ಯರಿಗೆ ಆ ಅವಕಾಶ ನೀಡಬಾರದು. ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ವ್ಯಾಪಾರದ ದೃಷ್ಟಿಯಲ್ಲೂ ಯೋಚಿಸಬೇಕು’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು