ಮೈಸೂರು: ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಿಲ್ಲ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಭವಿಷ್ಯ ನುಡಿದರು.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಕ್ರವಾರದಂದು ಭೈರಪ್ಪ ಅವರನ್ನು ಭೇಟಿಯಾದ ವೇಳೆ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ನನ್ನ ಪ್ರಕಾರ ಈ ಬಾರಿ ಮತ ವಿಭಜನೆಯಾಗುತ್ತದೆ. ಆದರೆ, ಬಿಜೆಪಿಯು ತೀರಾ ಸೋತು ಹೋಗುವುದಿಲ್ಲ. ಬಿಜೆಪಿ ಕೊನೆ ಪಕ್ಷ ಅರ್ಧಕ್ಕಿಂತಲೂ ಜಾಸ್ತಿ ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿದುಕೊಂಡಿದ್ದೇನೆ’ ಎಂದರು.
ಎಲ್ಲವನ್ನೂ ಉಚಿತವಾಗಿ ಕೊಡುತ್ತಿರುವುದರಿಂದ ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ. ಹೀಗಾಗಿಯೇ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೇಂದ್ರದಿಂದ ಕೊಟ್ಟಿದ್ದನ್ನೆಲ್ಲಾ ಖರ್ಚು ಮಾಡಿಕೊಂಡಿರುತ್ತಾರೆ. ಈಗ, ವಿತ್ತ ಸಚಿವರನ್ನು ಬೈಯ್ಯುತ್ತಿದ್ದಾರೆ. ಭಾಷೆಯನ್ನು ಗೌರವಯುತವಾಗಿ ಬಳಸುತ್ತಿಲ್ಲ. ಟೀಕಿಸುತ್ತಿರುವ ಸಂಸ್ಕೃತಿ ಸರಿ ಇಲ್ಲ ಎಂದರು.
ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಗ್ಯಾರಂಟಿಯಾಗಿ ಹೇಳಬಹುದು. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಷ್ಟ. ರಾಜ್ಯದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಆಗಿದೆ. ಉತ್ತರಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬಿಜೆಪಿ ಸರ್ಕಾರ ನಡೆದಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಬಹುದಿತ್ತು. ಯೋಗಿ ಆದಿತ್ಯನಾಥ ಅವರಂತಹ ಮುಖ್ಯಮಂತ್ರಿಯನ್ನು ಕಂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಸ್ವಲ್ಪ ಆ ಕಡೆಗೂ, ಈ ಕಡೆಗೂ ಎನ್ನುವಂತಹ ಸ್ಥಿತಿ ಇದೆ’ ಎಂದರು. ‘ಕರ್ನಾಟಕದಲ್ಲಿ ಮೋದಿ ಅಲೆ ಕಡಿಮೆ ಆಗಿದೆಯಾ?’ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.