ಬಂಟ್ವಾಳ: ಸ್ನೇಹಿತರ ಜೊತೆ ಈಜಲು ಬಂದ ಐವರ ಪೈಕಿ ವ್ಯಕ್ತಿಯೊಬ್ಬರು ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶಂಭೂರು ಗ್ರಾಮದ ದೇವಸ್ಥಾನವೊಂದರ ಸಮೀಪ ನದಿಯಲ್ಲಿ ನಿನ್ನೆ ಸಂಜೆ ನಡೆದಿದೆ.ಬೆಳ್ತಂಗಡಿ ನಿವಾಸಿ ಲೋಹಿತಾಕ್ಷ ಮೃತ ದುರ್ದೈವಿ.
ಲೋಹಿತಾಕ್ಷ ಬೆಳ್ತಂಗಡಿ ನಿವಾಸಿಗಳಾದ ವಿನ್ಸಿ,ಮ್ಯಾಕ್ಸಿ,ಪ್ರಮೋದ್, ದಯಾನಂದ ಎಂಬವರ ಜೊತೆಗೆ ನೇತ್ರಾವತಿ ನದಿಗೆ ಈಜಾಡಲು ಬಂದಿದ್ದರು. ವಿನ್ಸಿ ಎಂಬವರ ಪತ್ನಿಯ ಮನೆ ಶಂಭೂರಿನಲ್ಲಿದ್ದು, ಇಲ್ಲಿಗೆ ಅವಾಗ ಅವಾಗ ಬಂದು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಿದ್ದರು.
ನಿನ್ನೆ ಕೂಡ ಅದೇ ರೀತಿ ಸ್ನೇಹಿತರು ಬೆಳ್ತಂಗಡಿಯಿಂದ ಕಾರಿನಲ್ಲಿ ಬಂದಿದ್ದು, ನದಿಗೆ ಸ್ನಾನ ಮಾಡಲು ಬಂದಿದ್ದರು.
ಸಂಜೆ ಸುಮಾರು 4 ಗಂಟೆ ವೇಳೆಗೆ ನದಿಯಿಂದ ಲೋಹಿತಾಕ್ಷ ಅವರು ಕಾರಿನ ಬಳಿಗೆ ಹೋಗುವುದಾಗಿ ಬಂದಿದ್ದರು. ಆದರೆ ಸ್ನೇಹಿತರು ಸ್ನಾನ ಮುಗಿಸಿ ಕಾರಿನತ್ತ ಬಂದಾಗ ಈತ ಕಾರಿನ ಬಳಿ ಇಲ್ಲದಿರುವುದನ್ನು ಕಂಡು ಗಾಬರಿಯಾಗಿ ಮತ್ತೆ ನದಿಯತ್ತ ತೆರಳಿದಾಗ ನದಿಯ ಬದಿ ನೀರಿನಲ್ಲಿ ಬಿದ್ದಿದ್ದರು.ಬಿದ್ದ ವೇಳೆ ತಲೆಯ ಭಾಗಕ್ಕೆ ಗಾಯವಾಗಿದ್ದು,ಅವರನ್ನು ಮೇಲೆತ್ತುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ಘಟನೆಯ ಬಗ್ಗೆ ಅಲ್ಲೇ ಸಮೀಪದಲ್ಲಿ ವಾಲಿಬಾಲ್ ಅಟ ಆಡುತ್ತಿದ್ದ ಸ್ಥಳೀಯರು ಗಮನಿಸಿ ವಿಚಾರಿಸಿದಾಗ ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಸ್ನೇಹಿತರನ್ನು ತನಿಖೆ ನಡೆಸಿ ಸ್ಪಷ್ಟವಾದ ಮಾಹಿತಿ ಯನ್ನು ಪಡೆಯಲಾಗುತ್ತದೆ ಎಂದು ಎಸ್.ಐ.ಹರೀಶ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


