ಬಂಟ್ವಾಳ: ರೈಲು ನಿಲ್ದಾಣದ ಬಳಿ ರಾತ್ರಿ ನಿಲ್ಲಿಸಿದ್ದ ರಿಕ್ಷಾ ಬೆಳಗ್ಗೆ ನಾಪತ್ತೆಯಾದ ಘಟನೆ ಬಿ.ಸಿ.ರೋಡಿನ ಕೈಕುಂಜೆ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
ಅಜಿಲಮೊಗರು ನಿವಾಸಿ ದೇಜಪ್ಪ ಯಾನೆ ಸತೀಶ್ ಎಂಬವರು, ತಮ್ಮ ರಿಕ್ಷಾವನ್ನು ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿ ಬೇರೆ ವಾಹನದಲ್ಲಿ ತೆರಳಿದ್ದರು. ಮುಂಜಾನೆ ಸುಮಾರು 3.30ರ ಸಮಯದಲ್ಲಿ ಬಂದು ನೋಡಿದಾಗ ಆಟೋ ಇಟ್ಟ ಜಾಗದಲ್ಲಿ ಕಾಣಿಸಲಿಲ್ಲ. ಹುಡುಕಾಡಿದರೂ ಇದು ಸಿಗಲಿಲ್ಲ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸರು ರಿಕ್ಷಾ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇನ್ನು ಆಟೋ ರಿಕ್ಷಾವನ್ನು ಕಳವು ಮಾಡಿ ಕೊಂಡುಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.ಪುರುಷ ಮತ್ತು ಮಹಿಳೆಯೊಬ್ಬಳು ಆರಂಭದಲ್ಲಿ ರಿಕ್ಷಾವನ್ನು ಹಿಂಬದಿಗೆ ದೂಡುತ್ತಾರೆ. ಬಳಿಕ ಯಾವುದೋ ಸಾಧನ ಬಳಸಿ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ .
ಅಲ್ಲದೇ ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿ, ಸ್ಮಶಾನ ಸುತ್ತಮುತ್ತಲಿನ ಪರಿಸರದಲ್ಲಿ ಹಗಲು, ರಾತ್ರಿ ಎನ್ನದೆ, ಅಪರಿಚಿತರು, ಜೋಡಿಗಳ ಸಂಚಾರ ಕಂಡುಬರುತ್ತಿದ್ದು, ಅಲ್ಲಿರುವ ಬೀದಿ ದೀಪಗಳನ್ನ ಸ್ವಿಚ್ ಗಳನ್ನೂ ಆಫ್ ಮಾಡಿ ಹೋಗುವವರೂ ಇದ್ದಾರೆ. ರೈಲ್ವೆ ನಿಲ್ದಾಣದಿಂದ ನೇತ್ರಾವತಿ ನದಿ ತೀರದವರೆಗಿನ ಜಾಗದಲ್ಲಿ ಅಪರಿಚಿತರು ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಕೇಳಿ ಬಂದಿದೆ.