ಬೆಳ್ತಂಗಡಿ: ಮಲಬದ್ಧತೆ ಸಮಸ್ಯೆಯಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಹೆಬ್ಬಾವಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಗುಣಪಡಿಸಿದ ಜೀವದಾನ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬಂಟ್ವಾಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಹೆಬ್ಬಾವೊಂದು ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಉರಗಪ್ರೇಮಿ ಧೀರಜ್ ನಾವೂರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೆಬ್ಬಾವು ಹೆಬ್ಬಾವು ಮಲಗಿದ್ದಲ್ಲಿಂದ ಏಳದೆ ಇರುವುದನ್ನು ಗಮನಿಸಿದ ಧೀರಜ್ ಹೆಬ್ಬಾವಿಗೆ ಯಾವುದೋ ಆರೋಗ್ಯ ಸಮಸ್ಯೆ ಇರುವುದನ್ನು ಪತ್ತೆಹಚ್ಚಿದ್ದಾರೆ. ತಡ ಮಾಡದೆ ತನ್ನ ಬೈಕಿನಲ್ಲೇ ಹೆಬ್ಬಾವನ್ನು ಮಂಗಳೂರಿನ ಲಿಟಿಲ್ ಪಾವ್ಸ್ ಪಶು ವೈದ್ಯಕೀಯ ಚಿಕಿತ್ಸಾಲಯಕ್ಕೆ ಸಾಗಿಸಿದ್ದಾರೆ. ಲಿಟಿಲ್ ಪಾವ್ಸ್ ವೈದ್ಯರಾದ ಡಾ. ಯಶಸ್ವಿ ನಾರಾವಿ ಹೆಬ್ಬಾವನ್ನು ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದ ವೈದ್ಯರಿಗೆ ಹೆಬ್ಬಾವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದೆ ಎನ್ನುವ ವಿಚಾರ ತಿಳಿದು ಬಂದಿದೆ.
ಹೆಬ್ಬಾವಿನ ಹೊಟ್ಟೆಯಿಂದ ಮಲಬದ್ಧತೆ ಗೆ ಕಾರಣವಾದ ವಸ್ತುಗಳನ್ನು ಹೊರ ತೆಗೆಯಲು ಮತ್ತು ಹಾವಿನ ಜೀರ್ಣಕ್ರಿಯೆ ಸ್ವಾಭಾವಿಕವಾಗಿ ನಡೆಯುವಂತೆ ಮಾಡಲು ಶಸ್ತ್ರಚಿಕಿತ್ಸೆಯೊಂದೇ ಮಾರ್ಗ ಎಂದು ಪರಿಗಣಿಸಿದ ಹೆಬ್ಬಾವಿಗೆ ಅನಸ್ತೇಸಿಯಾ ನೀಡಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ ಮೊದಲು ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿ ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ಫ್ಲೀಯುಡ್, ಆಂಟಿ ಬಯೋಟಿಕ್ ನೀಡಿ ಹೆಬ್ಬಾವನ್ನು ಮತ್ತೆ ಓಡಾಡುವ ಸ್ಥಿತಿಗೆ ತಂದಿದ್ದಾರೆ.
ಹೆಬ್ಬಾವನ್ನು ಧೀರಜ್ ಅದು ಪತ್ತೆಯಾದ ಸ್ಥಳದಲ್ಲೇ ಮತ್ತೆ ಬಿಟ್ಟು ಬಂದಿದ್ದು, ಹೆಬ್ಬಾವು ಅರಾಮವಾಗಿ ಸಾಗಿ ಕಾಡು ಸೇರಿಕೊಂಡಿದೆ.


