ಮಂಗಳೂರು: ನಾಗರ ಹಾವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಡಬ್ಬಿಯನ್ನು ಹೊರ ತೆಗೆದು ಪಶುವೈದ್ಯರು ಹಾವಿನ ಪ್ರಾಣ ಉಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬಂಟ್ವಾಳದ ಹಾವು ರಕ್ಷಕ ಸ್ನೇಕ್ ಕಿರಣ್ ಅವರು ಬಿಲದಲ್ಲಿ ನಾಗರಹಾವೊಂದನ್ನು ನೋಡಿದ್ದರು. ಎರಡು ದಿನಗಳಾದರೂ ಅದು ಸ್ಥಳದಿಂದ ಕದಲದ ಕಾರಣ ಗಾಯಗೊಂಡಿದೆ ಎಂದು ಶಂಕಿಸಿದ ಕಿರಣ್, ಹಾವನ್ನು ಸೆರೆಹಿಡಿದಿದ್ದಾರೆ. ಸುಮಾರು 10 ವರ್ಷ ವಯಸ್ಸಿನ ಈ ನಾಗರಹಾವಿನ ದೇಹದ ಮೇಲೆ ಎರಡು ದೊಡ್ಡ ಗಾಯಗಳಿರುವುದನ್ನು ಗಮನಿಸಿ ಚಿಕಿತ್ಸೆಗಾಗಿ ಚಿಕಿತ್ಸಾಲಯಕ್ಕೆ ಕೊಂಡೊಯ್ದಿದ್ದರು.
ಹಾವಿಗೆ ಲಿಟಲ್ ಪಾವ್ಸ್ನ ಡಾ.ಯಶಸ್ವಿ ನಾರಾವಿ ನೇತೃತ್ವದ ಪಶುವೈದ್ಯರ ತಂಡದಿಂದ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ.
ಪರೀಕ್ಷೆ ವೇಳೆ ಹಾವಿನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ತಿಳಿದುಬಂದಿದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಸಿದ್ಧತೆಗಳನ್ನು ಮಾಡಿ ನಂತರ ಹಾವಿಗೆ ಅರಿವಳಿಕೆ ಮದ್ದು ನೀಡಿ ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಡಬ್ಬಿಯನ್ನು ಹೊರ ತೆಗೆದಿದ್ದಾರೆ.