ಬೆಳ್ತಂಗಡಿ; ಜೂನ್ 4 ರಂದು ಪತ್ನಿ ಮತ್ತು ತನ್ನಿಬ್ಬರು ಮಕ್ಕಳ ಜೊತೆ ಕೇರಳಕ್ಕೆ ಪ್ರವಾಸ ಹೋಗಿದ್ದ ವೇಳೆ ರಸ್ತೆ ದಾಟುವಾಗ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಉಜಿರೆಯ ಮಾಚಾರು ನಿವಾಸಿ ಯುವಕ ಅಶ್ರಫ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾಚಾರು ಕುದುರು ನಿವಾಸಿ, ಎಸ್ವೈಎಸ್ ಉಜಿರೆ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಹಮೀದ್ ಮೈಮುನಾ ದಂಪತಿ ಪುತ್ರರಾಗಿರುವ ಅಶ್ರಫ್ ಅವರಿಗೆ ಕಳೆದ ಜೂ.4 ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಪಯ್ಯಂಗಡಿ ಎಂಬಲ್ಲಿ ಅಪಘಾತವಾಗುತ್ತು.
ಕಾರಿನಲ್ಲಿ ಪತ್ನಿ ಪಕ್ಕಳ ಸಮೇತ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗಿದ್ದ ಅವರು ಒಂದೆಡೆ ಕಾರಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅತೀ ವೇಗವಾಗಿ ಬಂದ ಬೈಕೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದರು. ಆ ಬಳಿಕದಿಂದ ಕೋಮಾ ಸ್ಥಿತಿಯಲ್ಲಿ ಕೇರಳದ ಅಸ್ತರ್ ಮಿಮ್ಸ್ ಆಸ್ಪತ್ರೆ, ಮಂಗಳೂರಿನ ಕಂಕನಾಡಿ ಆಸ್ಪತ್ರೆ, ಉಪ್ಪಿನಂಗಡಿಯ ನಿರಂಜನ ಹೋಮ್ ಕೇರ್ ಕ್ಲಿನಿಕ್, ಬಳಿಕ ದೇರಳಕಟ್ಟೆಯ ಮಸಾಜ್ ಸೆಂಟರ್ ಇಲೆಲ್ಲಾ ಚಿಕಿತ್ಸೆಯಲ್ಲಿದ್ದರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಅಪಘಾತ ಆದ ದಿನದಿಂದಲೇ ಕೋಮಾಕ್ಕೆ ಜಾರಿದ್ದ ಅವರಿಗೆ ಪೈಪ್ ಮೂಲಕ ಆಹಾರ ನೀಡಲಾಗುತ್ತಿತ್ತು. ಆದರೆ ಇದೀಗ ಅವರು ನಿಧನರಾಗಿದ್ದಾರೆ.
ಉಪ್ಪಿನಂಗಡಿಯಲ್ಲಿ ಬ್ರೈಟ್ ಲುಕ್ ಎಂಬ ವಸ್ತ್ರ ಮಳಿಗೆ ನಡೆಸುತ್ತಿದ್ದ ಅವರು ಎಸ್ಸೆಸ್ಸೆಫ್ ಕಾರ್ಯಕರ್ತರಾಗಿದ್ದರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ತಂದೆ ತಾಯಿ ಮಾತ್ರವಲ್ಲದೆ ಪತ್ನಿ, ಇಬ್ಬರು ಪುಟಾಣಿ ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.