ಕಡಬ: ಮಂಗಳೂರಿನ ಯುವಕನೊಬ್ಬನನ್ನು ಕಡಬ ಸಮೀಪದ ಮರ್ದಾಳದ ಯುವಕರ ತಂಡ ಹನಿಟ್ರ್ಯಾಪ್ ಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕಡಬ ಪೋಲಿಸರು ಸಿನಿಮೀಯ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಅ.5ರಂದು ಸಂಜೆ ನಡೆದಿದೆ.
ಮಂಗಳೂರು ಸಮೀಪದ ಯುವಕನೋರ್ವ ಅ.4ರ ತಡರಾತ್ರಿ ಮರ್ದಾಳಕ್ಕೆ ಬಂದಿದ್ದು , ಆ ಯುವಕನನ್ನು ಯುವಕರ ತಂಡವೊಂದು ಕರ್ಮಾಯಿ ಕೋರಿಯರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿ ಹಣ ನೀಡದಿದ್ದರೆ ಹುಡುಗಿಯ ವಿಚಾರದಲ್ಲಿ ನಿನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಒಡ್ಡಿ ಹಣ ತರುವಂತೆ ಹೇಳಿ ಬಿಟ್ಟಿದ್ದರು ಎನ್ನಲಾಗಿದೆ.
ಅ.5 ರಂದು ಕಡಬದಲ್ಲಿದ್ದ ಮಂಗಳೂರಿನ ಯುವಕ ತನ್ನ ಸ್ನೇಹಿತರೋರ್ವರ ಮೂಲಕ ಕಡಬ ಪೋಲಿಸರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಬಳಿಕ ಕಾರ್ಯಪ್ರವೃತ್ತರಾದ ಕಡಬ ಪೋಲಿಸರು ಸಂತ್ರಸ್ಥ ನ ಮೂಲಕ ಆರೋಪಿಗಳಿಗೆ ಹಣ ನೀಡುವ ಬಗ್ಗೆ ಬರ ಹೇಳಿದ್ದು ಅದರಂತೆ ಮೂವರು ಬಂದಿದ್ದರು. ಆರೋಪಿಗಳು ಎರಡು ಪ್ರತ್ಯೇಕ ವಾಹನದಲ್ಲಿ ಇದ್ದು, ಇಬ್ಬರಿಗೆ ದೂರದಿಂದಲೇ ಪೋಲಿಸರು ಬರುವ ಮಾಹಿತಿ ಅರಿತ ಅವರು ಪರಾರಿಯಾಗಿದ್ದಾರೆ.
ಈ ವೇಳೆ ಓರ್ವ ಆರೋಪಿ ಕೂಡ ಪೋಲಿಸರನ್ನು ಕಂಡ ಕೂಡಲೇ ಕಡಬದಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ನೂಜಿಬಾಳ್ತಿಲ ರಸ್ತೆಯ ಮೂಲಕ ಹೋಗಿದ್ದಾನೆ. ಆತನನ್ನು ಬೆನ್ನಟ್ಟಿದ್ದ ಕಡಬ ಪೋಲಿಸರು ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪ ವಶಕ್ಕೆ ತೆಗೆದುಕೊಂಡಿದ್ದಾರೆ.
ಮರ್ದಾಳದ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಂಡಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಪೋಲಿಸರ ತನಿಖೆಯ ಬಳಿಕವಷ್ಟೆ ತಿಳಿದುಬರಬೇಕಿದೆ.