ಉಡುಪಿ: ಉಡುಪಿ ನಗರದ ಪೂರ್ಣ ಪ್ರಜ್ಞಾ ಕಾಲೇಜಿನಿಂದ ಅಮಣ್ಣಿ ರಾಮಣ್ಣ ಶೆಟ್ಟಿ ಹಾಲ್ಗೆ ಹೋಗುವ ರಸ್ತೆಯಲ್ಲಿರುವ ಕಳೆ ಗಿಡಗಳಿಂದ ತುಂಬಿರುವ ಖಾಲಿ ಜಾಗದಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಸೇರಿದಂತೆ ಒಟ್ಟು ನಾಲ್ಕು ಹೆಬ್ಬಾವುಗಳು ನಿನ್ನೆ ಸಂಜೆ ವೇಳೆ ಪತ್ತೆಯಾಗಿವೆ.
12 ಅಡಿ ಉದ್ದದ ಒಂದು, ಎಂಟು ಅಡಿ ಉದ್ದದ ಎರಡು ಹಾಗೂ ಐದು ಅಡಿ ಉದ್ದದ ಒಂದು ಹೆಬ್ಬಾವುಗಳನ್ನು ಕುಂಜಿಬೆಟ್ಟುವಿನ ಗಣೇಶ್ ಆಚಾರ್ಯ ನೇತೃತ್ವದಲ್ಲಿ ರಕ್ಷಿಸಿ, ಬಳಿಕ ಸುರಕ್ಷಿತವಾಗಿ ಸಮೀಪದ ಅರಣ್ಯಕ್ಕೆ ಬಿಡಲಾಯಿತು.
ರಕ್ಷಣಾ ಕಾರ್ಯಾಚರಣೆ ವೇಳೆ ಬೃಹತ್ ಗಾತ್ರ ಹೆಬ್ಬಾವು ಗಣೇಶ್ ಆಚಾರ್ಯ ಕೈಗೆ ಕಚ್ಚಿದ್ದು, ಇದರಿಂದ ಗಾಯಗೊಂಡ ಅವರಿಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದಿ.ಅಣ್ಣಪ್ಪ ಶೆಣೈ ಎಂಬವರಿಗೆ ಸೇರಿದ 50 ಸೆಂಟ್ಸ್ ಖಾಲಿ ಜಾಗದಲ್ಲಿ ಬೆಳೆದು ನಿಂತ ಕಳೆಗಿಡ, ಹುಲ್ಲನ್ನು ಕಳೆದ ಎರಡು ವರ್ಷಗಳಿಂದ ತೆರವುಗೊಳಿಸಿಲ್ಲ ಎನ್ನ ಲಾಗಿದೆ. ಇದರಿಂದ ಇಲ್ಲಿ ಹೆಬ್ಬಾವು ವಾಸ ಮಾಡಿಕೊಂಡಿವೆ. ಇನ್ನಷ್ಟು ಹೆಬ್ಬಾವಿನ ಮರಿ ಈ ಜಾಗದಲ್ಲಿ ಇರಬಹುದೆಂದು ಶಂಕಿಸಲಾಗಿದೆ.
ನ್ಯಾಯವಾದಿ ಲಕ್ಷ್ಮಣ್ ಶೆಣೈ, ಸುಧೀರ್ ನಾಯಕ್, ಅಟೋ ಚಾಲಕ ರಾಜ್ ಕುಮಾರ್, ಅಶ್ವಥ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.