ಬೆಳ್ತಂಗಡಿ: ತಾಲೂಕಿನ ಆರಂಬೋಡಿ ಗ್ರಾಮದ ರಾಮಚಂದ್ರರವರ ಪುತ್ರ ಪ್ರವೀಣ್ ಕುಮಾರ್ ಮತ್ತು ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿಗಳಿಬ್ಬರ ಸಹಿತ ಮೂವರು ಚಿನ್ನಾಭರಣ ತಯಾರಿಸುವ ಅಂಗಡಿಗೆ ಲಕ್ಷಾಂತರ ರೂ. ಮೌಲ್ಯದ ಅಪರೂಪದ ವಜ್ರದ ಹರಳುಗಳ ಮಾರಾಟಕ್ಕೆ ಹೊಂಚು ಹಾಕುತ್ತಿದ್ದಾಗ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ರಾಮಚಂದ್ರರವರ ಪುತ್ರ ಪ್ರವೀಣ್ ಕುಮಾರ್ (51ವ.) ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಾಮಚಂದ್ರರವರ ಪುತ್ರ ರವಿ ಕುಮಾರ್(54ವ), ಬೆಳಂದೂರು ಗ್ರಾಮದ ಅಣ್ಣಿ ಪೂಜಾರಿಯವರ ಪುತ್ರ ಸುಧೀರ್(28ವ) ಬಂಧಿತ ಆರೋಪಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಂದ ಸುಮಾರು 40ಲಕ್ಷ ರೂ. ಬೆಲೆ ಬಾಳುವ 80 ಅಪರೂಪದ ವಜ್ರದ ಹರಳುಗಳನ್ನು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಸಿಟಿ ಮಾರುಕಟ್ಟೆಯ ಅಂಚೆ ಪೇಟೆ ಬಳಿ ಆಭರಣ ತಯಾರಿಸುವ ಅಂಗಡಿಗಳಿಗೆ ವಜ್ರಗಳನ್ನು ಮಾರಾಟ ಮಾಡಲು ಬಂದ ಆರೋಪಿಗಳನ್ನು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
