ಮುಂಬೈ: ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾಗಿ ಅರ್ಧ ಘಂಟೆಗಳ ಕಾಲ ಆಮ್ಲಜನಕ ಸರಬರಾಜು ನಿಂತ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದ 22 ರೋಗಿಗಳು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್ನ ಝಾಕಿತ್ ಹುಸೇನ್ ಆಸ್ಪತ್ರೆಯಲ್ಲಿ ನಡೆದಿದೆ.
ಆಮ್ಲಜನಕದ ಸರಬರಾಜು ನಿಲುಗಡೆಯಾದ ಕಾರಣ ರೋಗಿಗಳ ಸಂಬಂಧಿಕರು ಕಂಗಾಲಾದರು. ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ರೋಗಿಗಳು ವೆಂಟಿಲೇಟರ್ನ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 22 ರೋಗಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ರೋಗಿಗಳು ಕೋವಿಡ್ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದರು.
ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ರಾಜೇಶ್ ಟೋಪೆ ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಈ ದುರ್ಘಟನೆಯನ್ನು ಮಹಾರಾಷ್ಟ್ರ ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗುವುದು’ ಎಂದು ತಿಳಿಸಿದ್ದಾರೆ.
ಟ್ಯಾಂಕರ್ನಿಂದ ಸೋರಿಕೆಯಾದ ಆಮ್ಲಜನಕ ಸುತ್ತಮುತ್ತಲಿನ ವಾತಾವರಣದಲ್ಲಿ ಹರಡರುವುದನ್ನು ಕಂಡು ಆಸ್ಪತ್ರೆಯ ಸುತ್ತ ನೆರೆದಿದ್ದ ಜನರು, ರೋಗಿಗಳ ಸಂಬಂಧಿಕರು ಗಾಬರಿಗೊಳಗಾದರು. ನೀರು ಚಿಮುಕಿಸಿ ಆಮ್ಲಜನಕ ಸೋರಿಕೆಯನ್ನು ತಡೆಯಲು ಪ್ರಯತ್ನಿಸಿದರು. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.