ಉತ್ತರ ಕನ್ನಡ: ಮುಂಡಗೋಡ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಿರೀಶ ಎಸ್.ಎಮ್ ಎಂಬಾತ ಮನೆ ಕಟ್ಟಲು ಹಣದ ಅವಶ್ಯಕತೆಯಿದೆ ಎಂದು ಯುವತಿಯೊಬ್ಬಳಿಗೆ ನಂಬಿಸಿ, ಮೋಸದಿಂದ 18 ಲಕ್ಷ ರೂಪಾಯಿ ಪಡೆದುಕೊಂಡು ವಂಚಿಸಿದ ಆರೋಪದ ಮೇಲೆ ಭಾನುವಾರ ರಾತ್ರಿ ಪ್ರಕರಣ ದಾಖಲಾಗಿದೆ.
2018ರ ಏಪ್ರಿಲ್ 27 ರಿಂದ 2023ರ ಆಗಸ್ಟ್ 23ರವರೆಗೆ ಕಾನ್ಸ್ಟೇಬಲ್ ಗಿರೀಶ್ ಎಂಬಾತನು ಮನೆ ಕಟ್ಟಲು ಹಣದ ಅವಶ್ಯಕತೆಯಿದೆ ಎಂದು ಹಾಸನ ಮೂಲದ ಯುವತಿಯ ನಂಬಿಸಿ ಆನ್ ಲೈನ್ ಮೂಲಕ ಹಾಗೂ ಏ.28 2021ರಂದು ಮುಂಡಗೋಡದ ಕೆಎಚ್.ಬಿ ಕಾಲನಿಯ ಮನೆಯಲ್ಲಿ 2.50ಲಕ್ಷ ರೂಪಾಯಿ ಸೇರಿ ಒಟ್ಟು 18ಲಕ್ಷ ರೂಪಾಯಿ ತೆಗೆದುಕೊಂಡು ಯುವತಿಗೆ ಚೆಕ್ ಗಳನ್ನು ನೀಡಿ ತೆಗೆದುಕೊಂಡ ಹಣ ಮರಳಿ ನೀಡದೇ ನಂಬಿಸಿ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಒಂದೇ ಜಿಲ್ಲೆಯವರಾದ ಇವರು ಯುವತಿಯ ಮದುವೆಯಾಗುವುದಾಗಿ ನಂಬಿಸಿ ಮನೆ ಕಟ್ಟುವುದು, ಗದ್ದೆ ಕೆಲಸ ಹೀಗೆ ಯುವತಿಗೆ ಮರುಳು ಮಾಡಿ ಹಣ ಪಡೆದು ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡಿದ್ದ ಎನ್ನಲಾಗಿದೆ. ಈ ಹಿಂದೆ ಈ ಬಗ್ಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಯುವತಿಗೆ ಹಣ ನೀಡುವುದಾಗಿ ಒಪ್ಪಿಕೊಂಡು ಹಣ ನೀಡಲು ಸಮಯ ಪಡೆದು ಚೆಕ್ ನೀಡಿದ್ದ ಆದರೆ ಈವರೆಗೂ ಹಣ ನೀಡದಿರುವುದರಿಂದ ಭಾನುವಾರ ರಾತ್ರಿ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಇದಲ್ಲದೆ ತಾಲೂಕಿನ ಇತರ ಕಡೆ ಮತ್ತು ಕೆಲ ಸಿಬ್ಬಂದಿಗಳ ಬಳಿ ಹಣ ಪಡೆದು ವಾಪಸ್ ನೀಡದಿರುವುದು ಬೆಳಕಿಗೆ ಬಂದಿದೆ. ಇನ್ನು ಕೆಲವರು ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ