ಮಂಗಳೂರು: ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೆಂಕಿಗಾಹುತಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಬಿಜು ಮೋಹನ್ ಎಂಬಾತನನ್ನು ಸಂಚಾರಿ ಉರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಸಿಟಿ ಬಸ್ ಚಾಲಕ ಚಾಲಕ ಬಿಜು ಮೋಹನ್ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿತ್ತು ಎಂದು ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ ಎ.26ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಸ್ ಅನ್ನು ಬಿಜು ಮೋಹನ್ ಸುರತ್ಕಲ್ ಜನತಾ ಕಾಲನಿಯಿಂದ ಮಂಗಳೂರು ಸ್ಟೇಟ್ ಬ್ಯಾಂಕ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದನು. ಈ ಸಂದರ್ಭ ಹಂಪನಕಟ್ಟೆ ಸಿಗ್ನಲ್ ದಾಟಿ ಮುಂದೆ ಬರುತ್ತಿದ್ದ ಸಂದರ್ಭ ಚಾರ್ಟೆಡ್ ಅಕೌಂಟ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಲ್ಲಾಳ್ ಬಾಗ್ ನಿವಾಸಿ ಡೇಲನ್(26) ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳು ನಡುರಸ್ತೆಯಲ್ಲಿಯೇ ಬೆಂಕಿಗಾಹುತಿಯಾಗಿತ್ತು. ನಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ಕಾಲಿಗೆ ಗಾಯವಾಗಿತ್ತು. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.