ಮುಂಬೈ: ದೇಶದ ಇತಿಹಾಸದಲ್ಲೇ ಭಯಾನಕ ಎಂದೆನಿಸುವ ಘಟನೆಯೊಂದು12 ವರ್ಷಗಳ ಹಿಂದೆ ನಡೆದಿತ್ತು. ಹೌದು ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಉಗ್ರ ದಾಳಿಯ ಕರಾಳತೆಗೆ ಇಂದಿಗೆ 12 ವರ್ಷ. 166 ಜನರು ಉಗ್ರರ ಕ್ರೌರ್ಯಕ್ಕೆ ಬಲಿಯಾಗಿದ್ದರು. 2008 ನವೆಂಬರ್ 26ರಂದು ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯು ಸುಮಾರು ನಾಲ್ಕು ದಿನಗಳ ಕಾಲ ಮುಂದುವರೆದಿತ್ತು. ಈ ದಾಳಿಯಲ್ಲಿ 166ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಹಲವು ಸಂಖ್ಯೆಯ ನಿಷ್ಠಾವಂತ ಅಧಿಕಾರಿಗಳನ್ನು ದೇಶ ಈ ದಾಳಿಯಲ್ಲಿ ಕಳೆದುಕೊಂಡಿತ್ತು. ಈ ಘಟನೆಯಲ್ಲಿ ಮಡಿದವರಿಗೆ ರಾಜಕೀಯ ಗಣ್ಯರು, ಅನೇಕ ಕ್ಷೇತ್ರಗಳ ಪ್ರಮುಖರು ಗೌರವ ನಮನ ಸಲ್ಲಿಸುತ್ತಿದ್ದು ಭದ್ರತಾ ಪಡೆಗಳ ತ್ಯಾಗ ಮನೋಭಾವದ ಕುರಿತು ಬರೆದುಕೊಂಡಿದ್ದಾರೆ.
ಖ್ಯಾತ ಉದ್ಯಮಿ ರತನ್ ಟಾಟಾ ಅವರು ಈ ದಿನದ ಕುರಿತು ಬರೆದುಕೊಂಡಿದ್ದು “ಮರೆಯಲು ಸಾಧ್ಯವಾಗದ ಮಾರಕ ದಾಳಿ ಇದು ಯೋಧರು ಮತ್ತು ಹೋರಾಟವಲ್ಲದೆ ನಾವು ಹೆಚ್ಚು ಶ್ಲಾಘಿಸಬೇಕಿರುವುದು ನಾವು ಪಾಲಿಸಿಕೊಂಡು ಬಂದ ಏಕತೆ ಮತ್ತು ಕರುಣೆಯ ಮನೋಭಾವ ಹಾಗೂ ಸಂವೇದನಾಶೀಲತೆಯನ್ನು.
ಅದನ್ನು ನಾವು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದು ತಾಜ್ ಹೋಟೆಲ್ನ ಪೈಂಟಿಂಗ್ ಹಂಚಿಕೊಂಡಿದ್ದಾರೆ ದಾಳಿಯಲ್ಲಿ ಮೃತಪಟ್ಟ ಜನರು ಮತ್ತು ಹುತಾತ್ಮರಾದ ಯೋಧರಿಗೆ ಅವರು ಈ ಮೂಲಕ ಗೌರವ ಸಲ್ಲಿಸಿದ್ದಾರೆ.