ಬಂಟ್ವಾಳ: ತಾಲೂಕಿನ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯುವಕನೋರ್ವ ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಮುಸ್ಲಿಂ ಸಮುದಾಯದ ಯುವಕರ ತಂಡವೊಂದು ಈದುಲ್ ಫಿತರ್ ಲೆಕ್ಕಿಸದೇ ಕ್ಷಣಾರ್ಧದಲ್ಲಿ ಯುವಕನನ್ನು ರಕ್ಷಿಸಲು ನದಿಗೆ ಹಾರಿ ಮಾನವೀಯತೆ ಮೆರೆದಿದ್ದಾರೆ.
ಕಲ್ಲಡ್ಕ ಹನುಮಾನ್ ನಗರದ ಕೊಳಕೀರು ನಿವಾಸಿ ಚಂದ್ರಹಾಸ ಮೂಲ್ಯರ ಪುತ್ರ ನಿಶಾಂತ್, ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಈದುಲ್ ಫಿತ್ರ್ ಹಬ್ಬದ ಸಂಭ್ರಮದಲ್ಲಿದ್ದ ಸ್ಥಳೀಯ ಯುವಕರ ತಂಡ ಜಮಾಯಿಸಿದರು. ಈ ಪೈಕಿ ಈಜುಪಟುಗಳಾದ ಗೂಡಿನಬಳಿಯ ಶಮೀರ್ ಮುಹಮ್ಮದ್ ಮೊಮ್ಮು, ತೌಸೀಫ್ ಝಾಹಿದ್ ಜಾಯಿ, ಅಕ್ಕರಂಗಡಿಯ ಮುಕ್ತಾರ್ ಹಾಗೂ ಆರಿಫ್ ಹೈವೇ ಎಂಬವರು ಕ್ಷಣಮಾತ್ರದಲ್ಲಿ ನದಿಗೆ ಹಾರಿ ರಕ್ಷಿಸಿದ್ದಾರೆ.
ನದಿಯಲ್ಲಿ ಮುಳುಗಿದ್ದ ನಿಶಾಂತ್ನನ್ನು ಮೇಲಕ್ಕೆತ್ತಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬಂಟ್ವಾಳ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.