ಕಾಸರಗೋಡು: ಕಾಂಞಗಾಡ್ ನ ಸೋಂಕಾಲು ಎಂಬಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ಘಟನೆ ನಡೆದಿದೆ. ಮೃತನನ್ನು ಅಬ್ದುಲ್ ರಹ್ಮಾನ್ (29) ಎಂದು ಗುರುತಿಸಲಾಗಿದೆ.
ಇನ್ನು ದಾಳಿಯ ವೇಳೆ ಓರ್ವ ಆರೋಪಿಗೂ ಗಾಯಗಳಾಗಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಆರೋಪಿಯನ್ನು ಇರ್ಷಾದ್ (26) ಎಂದು ಗುರುತಿಸಲಾಗಿದೆ. ಕಲ್ಲೂರಾವಿ ನಿವಾಸಿಯಾದ ರಹ್ಮಾನ್ ಬೈಕ್ ನಲ್ಲಿ ಸ್ನೇಹಿತನ ಜೊತೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಲ್ಲೂರಾವಿ-ಹಳೆಕಡಪ್ಪುರ ಬಳಿ, ತಂಡವೊಂದು ದಾಳಿ ನಡೆಸಿ, ರಹ್ಮಾನ್ ಗೆ ಇರಿದು ಪರಾರಿಯಾಗಿದೆ. ಗಾಯಗೊಂಡಿದ್ದ ರಹ್ಮಾನ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಬದುಕುಳಿಯಲಿಲ್ಲ. ಇನ್ನು ರಹ್ಮಾನ್ ಜೊತೆಗಿದ್ದ ಶುಹೈಬ್ ಎಂಬಾತನಿಗೂ ಗಾಯವಾಗಿದೆ.
ಇತ್ತೀಚೆಗೆ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ವಿಜಯೋತ್ಸವ ವೇಳೆ ಡಿವೈಎಫ್ ಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಮುಸ್ಲಿಂ ಲೀಗ್ ಕಾರ್ಯಕರ್ತರ ಕೈವಾಡದಿಂದ ಈ ಕೃತ್ಯ ನಡೆದಿರಬಹುದು ಎಂದು ಆರೋಪಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.