ಬೆಳ್ಳಾರೆ: ಅಂಗಡಿಯೊಂದರಲ್ಲಿ ಸಿಗರೇಟು ಖಾಲಿಯಾಗಿದೆ ಎಂದಿದ್ದಕ್ಕೆ ಯುವಕನೊಬ್ಬ ಅಂಗಡಿಯಲ್ಲಿ ದಾಂಧಲೆ ಅಲೆಕ್ಕಾಡಿಯಲ್ಲಿ ನಡೆದಿದೆ. ಅಲೆಕ್ಕಾಡಿಯ ಸಂಕಪ್ಪ ಸಾಲಿಯಾನ್ ಎಂಬವರ ಅಂಗಡಿಗೆ ಬಂದ ಯುವಕ ಸಿಗರೇಟ್ ಕೇಳಿದ್ದಾನೆ. ಆಗ ಅಂಗಡಿಯವರು ಸಿಗರೇಟ್ ಖಾಲಿಯಾಗಿದೆ ಎಂದಿದ್ದಾರೆ. ಇದರಿಂದ ಕೋಪಗೊಂಡ ಆತ ಅಂಗಡಿಯವರಿಗೆ ಬೈದನಲ್ಲದೆ ಅಂಗಡಿಯ ಹೊರಗೆ ಇರಿಸಲಾಗಿದ್ದ ಜ್ಯೂಸ್ ಬಾಟಲಿಯನ್ನು ತೆಗೆದುಕೊಂಡು ಹೋಗಿ ಎದುರಿನ ರಸ್ತೆಗೆ ಎಸೆದು ದಾಂಧಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದು ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಿಸುವಾಗ ಆತನ ಹೆಸರು ಯತೀಶ ಎಂದು ಗುರುತಿಸಲಾಗಿದ್ದು, ಮಾನಸಿಕ ಅಸ್ವಸ್ಥನೆಂದೂ, ಬಳಿಕ ಆತನನ್ನು ಅಂಬ್ಯುಲೆನ್ಸ್ನಲ್ಲಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತೆಂದು ತಿಳಿದು ಬಂದಿದೆ.
ಇದೇ ಯುವಕ ನಿನ್ನೆ ರಾತ್ರಿ ನರ್ಲಡ್ಕದಲ್ಲಿ ಅಂಗಡಿಯವರೊಬ್ಬರಿಗೂ ಇದೇ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ ಮೂರ್ನಾಲ್ಕು ಮನೆಗಳಿಗೆ ಹೋಗಿ ಬೈದಿದ್ದಾನೆ ಎಂದು ತಿಳಿದು ಬಂದಿದೆ.