ಬಜಪೆ: ಬಜಪೆ ಹದಗೆಟ್ಟ ರಾಜ್ಯ ಹೆದ್ದಾರಿಯಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಪಾಯದ ಪರಿಸ್ಥಿತಿ ಎದುರಾಗುತ್ತಿದೆ. ಅಪಘಾತಕ್ಕೆ ಕಾರಣವಾಗುತ್ತಿದೆ. ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಕೆಸರು ನೀರು ಸಿಂಪಡಣೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದೀಗ ಹೊಂಡಗಳಿಗೆ ತೇಪೆ ಕಾರ್ಯ ಆರಂಭವಾಗಿದೆ. ಬೆಳಗ್ಗೆ ಟಿಪ್ಪರ್ ಮೂಲಕ ಜಲ್ಲಿಕಲ್ಲು ಮಿಶ್ರಣವನ್ನು ತಂದು ಹೊಂಡ ಬಿದ್ದಲ್ಲಿ ತುಂಬಿಸುವ ಕಾರ್ಯ ನಡೆಯುತ್ತಿದೆ. ಬಜಪೆ ವ್ಯವಸಾಯ ಸೇವಾ ಸಹ ಕಾರಿ ಬ್ಯಾಂಕ್ ಎದುರುಗಡೆ ಹಾಗೂ ಬಸ್ ನಿಲ್ದಾಣದ ಎದುರಿನ ರಸ್ತೆ ಸಂಪರ್ಕಿಸುವಲ್ಲಿ, ಮಾರುಕಟ್ಟೆ ಅಂಗಡಿ ಎದುರು ಮಧ್ಯಾಹ್ನದ ತನಕ ಹೊಂಡ ಮುಚ್ಚುವ ಕಾರ್ಯ ನಡೆದಿದೆ.
ಇದರಿಂದ ದೊಡ್ಡ ಹೊಂಡಗಳು ಕೊಂಚ ಸುಧಾರಣೆ ಕಂಡಿದೆ. ಲಘುವಾಹನ ಹಾಗೂ ದ್ವಿಚಕ್ರ ವಾಹನಗಳಿಗೆ ಸಂಚಾರ ಕೊಂಚ ಸುಧಾರಣೆಯಾಯಿತು. ಹೊಂಡಗಳಿಗೆ ನೀರು ನಿಲ್ಲುವುದಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮಳೆಗೆ ಜಲ್ಲಿಕಲ್ಲು ಮಿಶ್ರಣ ರಸ್ತೆಯಲ್ಲಿ ಎಷ್ಟು ದಿನ ನಿಲ್ಲುತ್ತದೆ ಎಂಬುವುದು ಕಾದುನೋಡಬೇಕಾಗಿದೆ.