ಉಪ್ಪಿನಂಗಡಿ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ತಿಂಗಳ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಧಪಟ್ಟಂತೆ ಮಗುವಿನ ತಾಯಿ ಪತಿಯ ಮೇಲೆ ದೂರು ನೀಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
34ನೇ ನೆಕ್ಕಿಲಾಡಿ ಗ್ರಾಮದ ಸಾಂತ್ಯಡ್ಕ ನಿವಾಸಿ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಎಂಟು ತಿಂಗಳ ಮಗು ಜೀವಿತ್ನನ್ನು ಜ್ವರದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 1 ರಂದು ಮಗು ಸಾವನ್ನಪ್ಪಿದೆ. ಬಳಿಕ ಶ್ರೀಧರ ನಾಯ್ಕ ಪತ್ನಿ ಚಿತ್ರಾ ಅವರು ಜು. 2ರಂದು ಉಪ್ಪಿನಂಗಡಿ ಪೊಲೀಸರಿಗೆ ಮಗುವಿನ ಮರಣದ ಕುರಿತಾಗಿ ಪತಿಯ ಮೇಲೆ ವಿರುದ್ಧ ದೂರು ನೀಡಿದ್ದಾರೆ.
ಚಿತ್ರಾ ತಮ್ಮ ದೂರಿನಲ್ಲಿ, “ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ನನ್ನ ಗಂಡನಿಗೆ ಹೇಳಿದಾಗ ಪತಿ ಶ್ರೀಧರ ಕೋಪಗೊಂಡು ಜಗವಾಡಿ ನನ್ನನ್ನು ತಳ್ಳಿದ್ದು, ಈ ವೇಳೆ ನಾನು ಮಗುವಿನೊಂದಿಗೆ ಕೆಳಗೆ ಬಿದ್ದೆ. ನಂತರ ಮಗುವಿನ ಜ್ವರ ಹೆಚ್ಚಾಯಿತು. ನನ್ನ ಪತಿ ನನ್ನನ್ನು ತಳ್ಳಿದಾಗ ಬಿದ್ದ ಕಾರಣ ನನ್ನ ಮಗುವಿನ ಸಾವಿಗೆ ಕಾರಣವಾಗಿರಬಹುದು” ಎಂದು ದೂರಿದ್ದಾರೆ.
ಶ್ರೀಧರ ನಾಯ್ಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.ಆ ಬಳಿಕ ನಿಜಾಂಶ ಗೊತ್ತಾಗಲಿದೆ.