
ಬೆಂಗಳೂರು: ಕರ್ನಾಟಕಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲಿ ಕೇರಳ ಸರ್ಕಾರ ಯಾಕೆ ಮಧ್ಯಪ್ರವೇಶ ಮಾಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತಿಟ್ಟ ಪ್ರಕರಣವನ್ನು ಎಸ್ ಐಟಿಗೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಧರ್ಮಸ್ಥಳ ಹಿಂದೂಗಳಿಗೆ ಪವಿತ್ರ ಸ್ಥಳ, ವರ್ಷ ವರ್ಷ ಕೋಟ್ಯಂತರ ಭಕ್ತರು ಬರ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಅಪ್ಲೋಡ್ ಮಾಡ್ತಿರೋನು ಮುಸ್ಲಿಂ ವ್ಯಕ್ತಿ. ಕೇರಳದ ಕಮ್ಯೂನಿಸ್ಟ್ ಸರ್ಕಾರ ಈ ವಿಚಾರದಲ್ಲಿ ಮುತುವರ್ಜಿ ವಹಿಸ್ತಿದೆ. ಕರ್ನಾಟಕಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲಿ ಕೇರಳ ಸರ್ಕಾರ ಯಾಕೆ ಮಧ್ಯಪ್ರವೇಶ ಮಾಡಬೇಕು?. ಅಯ್ಯಪ್ಪ ಸ್ವಾಮಿ ದೇಗುಲ ವಿಚಾರದಲ್ಲಿ ಕೇರಳ ಸರ್ಕಾರದ ನಡೆ ಹೇಗಿತ್ತು ಅಂತ ಎಲ್ರಿಗೂ ಗೊತ್ತಿದೆ.ಅವರ್ಯಾಕೆ ಈಗ ಕರ್ನಾಟಕ ವಿಚಾರಕ್ಕೆ ಮೂಗು ತೂರಿಸಬೇಕು?.ಇನ್ನು ಬಹಳಷ್ಟು ಶವಗಳನ್ನು ಹೂತಿದ್ದಾರೆ ಅಂದ್ರೆ ಅಷ್ಟೇ ಸಂಖ್ಯೆಯ ದೂರುಗಳೂ ದಾಖಲಾಗಬೇಕಿತ್ತಲ್ಲ.ಯಾಕೆ ದಾಖಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇಂಥ ಪ್ರಕರಣಗಳಲ್ಲಿ ಪೊಲೀಸರು ಸಾಮಾನ್ಯವಾಗಿ ಅಚಾತುರ್ಯ ಮಾಡಲ್ಲ. ಈಗ ಏಕಾಏಕಿ ಆ ನಿಗೂಢ ವ್ಯಕ್ತಿಗೆ ಜ್ಞಾನೋದಯ ಯಾಕಾಯ್ತು?. ಎಸ್ಐಟಿ ದುರುದ್ದೇಶದ ತನಿಖೆ ಮಾಡದೇ ನಿಷ್ಪಕ್ಷಪಾತ ತನಿಖೆ ಮಾಡಲಿ .ಧರ್ಮಸ್ಥಳ ಹೆಸರಿನ ಮೇಲೆ ಅಪಪ್ರಚಾರ ಮಾಡ್ತಿರೋದು ಸರಿಯಲ್ಲ. ತಪ್ಪು ಮಾಡಿರೋದು ವ್ಯಕ್ತಿ, ಆದ್ರೆ ಸಂಸ್ಥೆ ಹೆಸರಿಗೆ ಯಾಕೆ ಅಪಪ್ರಚಾರ ಮಾಡಬೇಕು. ಎಸ್ಐಟಿ ತಂಡದವರಿಗೆ ಬೇರೆ ಯಾವುದೇ ಹೊಣೆ ಕೊಡದೇ ಇದನ್ನಷ್ಟೇ ತನಿಖೆ ಮಾಡಿಸಲಿ.ಈ ತನಿಖೆಯಲ್ಲೇ ಎಸ್ಐಟಿ ತಂಡ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿ ಎಂದಿದ್ದಾರೆ.


