ಮಂಗಳೂರು: ಅಪ್ರಾಪ್ತ ಬಾಲಕಿಯ ಅಪಹರಣ ನಡೆಸಿ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯೊಬ್ಬನಿಗೆ 12 ವರ್ಷ ಜೈಲು ಹಾಗೂ 85 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.
ಹೌದು, ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಬೆ ಸಮೀಪದ ಜನತಾ ಕಾಲನಿಯಿಂದ ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (25) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1(ಪೊಕ್ಸೊ) ನ್ಯಾಯಾಲಯವು 12 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಂಡದ ಮೊತ್ತದಲ್ಲಿ 50,000 ರೂ.ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ಜತೆಗೆ ಸರಕಾರ ಸಂತ್ರಸ್ತೆಗೆ 2 ಲ.ರೂ. ಪರಿಹಾರ ನೀಡಬೇಕು.85,000 ರೂ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಆದೇಶಿಸಿದ್ದಾರೆ.
ಪ್ರಕರಣದ ಕುರಿತು:
ಈತ 2019ರ ಜುಲೈ 25ರಂದು ಬೆಳಗ್ಗೆ ಪರಿಚಿತ ಬಾಲಕಿ ಶಾಲೆಗೆ ನಡೆದುಕೊಂಡು ಹೋಗುವ ವೇಳೆ ಸ್ನೇಹಿತ ಪರಶುರಾಮನ ಬೈಕ್ನಲ್ಲಿ ಆತನ ಸಹಕಾರದೊಂದಿಗೆ ಅಪಹರಿಸಿದ. ಬಳಿಕ ಆಕೆಯನ್ನು ಬಿ.ಸಿ.ರೋಡ್ ವರೆಗೆ ಬೈಕ್ನಲ್ಲಿ ಕರೆದೊಯ್ದು ಬಳಿಕ ಬಸ್ನಲ್ಲಿ ಮೂಡುಬಿದಿರೆ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದಿದ್ದ.ಅಲ್ಲಿ ಬಾಲಕಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಆ ಬಳಿಕ ಬಾಲಕಿಯನ್ನು ಈತ ಬೆಂಗಳೂರಿಗೆ ಕರೆದೊಯ್ದಿದ್ದ. ಮಗಳು ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಇದೇ ವೇಳೆ, ಬೆಂಗಳೂರಿನಲ್ಲಿ ಆರೋಪಿ ಮತ್ತು ಬಾಲಕಿಯನ್ನು ಕಂಡ ಪೊಲೀಸರು ಸಂಶಯಗೊಂಡು ವಿಚಾರಿಸಿದಾಗ ಅದು ವಿಟ್ಲ ಠಾಣೆಗೆ ಸಂಬಂಧಿಸಿದ ಪ್ರಕರಣ ಎನ್ನುವುದು ಬೆಳಕಿಗೆ ಬಂದಿದ್ದು, ಅವರನ್ನು ವಿಟ್ಲ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು.ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಪಹರಣಕ್ಕೆ ಸಹಕರಿಸಿದ ಆರೋಪದಲ್ಲಿ ಪರಶುರಾಮನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ 18 ಮಂದಿ ಸಾಕ್ಷಿದಾರರನ್ನು ವಿಚಾರಿಸಿ, ತೀರ್ಪು ಪ್ರಕಟಿಸಲಾಗಿದೆ.
ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದಾರೆ.