ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದ್ದು, ಊರಿನ ಯಾವುದೇ ಹಬ್ಬ,ಕಾರ್ಯಕ್ರಮ ತೆರಳಲು ನಿರ್ಬಂಧ ವಿಧಿಸಲಾಗಿದೆ.
ಯೋಧನ ಮನೆಯ ಕಾರ್ಯಕ್ರಮಕ್ಕೂ ಬೇರೆಯವರು ತೆರಳದಂತೆ ನಿರ್ಬಂಧ ಹೇರಲಾಗಿದೆ.
ಯಡೂರು ಗ್ರಾಮದ ಸಂಜಯ್ ಭಾರತೀಯ ಸೇನೆಯಲ್ಲಿ ಕೂರ್ಗ್ ರೆಜಿಮೆಂಟ್ ಯೋಧನಾಗಿದ್ದು, ಸದ್ಯ ಪಂಜಾಬ್ ನಲ್ಲಿ ಕರ್ತವ್ಯದಲ್ಲಿದ್ದಾರೆ.
ಯೋಧ ಸಂಜಯ್ ತಂದೆ ಲಿಂಗರಾಜ್ ಇನ್ಶ್ಯೂರೆನ್ಸ್ ಕಂಪೆನಿಯೊಂದರ ಏಜೆಂಟ್ ಆಗಿದ್ದು, ಊರಿನ ಜನರಿಂದ ಇನ್ಶ್ಯೂರೆನ್ಸ್ ಮಾಡಿಸಿದ್ದರು.
ಆದರೆ ಇನ್ಶ್ಯೂರೆನ್ಸ್ ಸಂಸ್ಥೆ ಮುಚ್ಚಿಹೋದ ಕಾರಣ ಹಣ ಹಿಂದಿರುಗಿಸುವಂತೆ ಊರಿನ ಜನರಿಂದ ಆಗ್ರಹ ವ್ಯಕ್ತವಾಗಿತ್ತು.
ಯಡೂರು ಗ್ರಾಮಾಭಿವೃದ್ಧಿ ಸಮಿತಿಯಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದ್ದು, ಈ ಬಗ್ಗೆ
ಸೇನೆಯ ಹಿರಿಯ ಅಧಿಕಾರಿಗಳಿಗೆ ಯೋಧ ಸಂಜಯ್ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೇನಾಧಿಕಾರಿಗಳಿಂದ ಕೊಡಗು ಡಿಸಿ ಎಸ್ಪಿಗೆ ಪತ್ರ ಬರೆಯಲ್ಪಟ್ಟಿದೆ.
ಇದರ ಜೊತೆಗೆ ಯೋಧನ ಮನೆಯ ಇಬ್ಬರು ಕಾರ್ಮಿಕರಿಗೂ ಬಹಿಷ್ಕಾರ ಹಾಕಲಾಗಿದ್ದು ಸಂಜಯ್ ಮನೆಯಲ್ಲಿ ಕೆಲಸ ಮಾಡದಂತೆ ಗ್ರಾಮ ಸಮಿತಿ ತಾಕೀತು ಮಾಡಿದೆ.