ಮಂಗಳೂರು: ದಸರಾ ಸಂದರ್ಭದಲ್ಲಿ ಕರಾವಳಿ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ವಿವಿಧ ವೇಷಗಳನ್ನು ತೊಟ್ಟಿರುವ ವೇಷಧಾರಿಗಳು ಸಿಗುತ್ತಾರೆ. ಮಕ್ಕಳಿಗೆ ದಸರಾ ಎಂದರೆ ನೆನಪಾಗುವುದೇ ಹುಲಿ ವೇಷಾ,ಕರಡಿ ವೇಷ. ಆದರೆ ಈ ವರ್ಷ ಕರಾವಳಿಯಲ್ಲಿ ಸದ್ದು ಮಾಡುತ್ತಿರುವ ವೇಷವೆಂದರೆ ಅದು ಆನೆಯ ವೇಷ.
ಹೌದು.ವಿಭಿನ್ನವಾಗಿರುವ ಆನೆ ವೇಷ ಸದ್ಯ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಗೋಣಿ ಚೀಲದಲ್ಲಿ ತಯಾರಿಸಿರುವ ಆನೆ ವೇಷ ನಿಜ ಆನೆಯನ್ನೇ ಹೋಲುತ್ತಿದೆ. ಆನೆಯ ವೇಷದೊಳಗೆ ಶಶಿಕಾಂತ್ ಮತ್ತು ಗಣೇಶ್ ಎಂಬುವವರಿದ್ದರೆ, ಮಾವುತನಾಗಿ ದಿನೇಶ್ ಸೇವೆ ಸಲ್ಲಿಸುತ್ತಿದ್ದಾರೆ.
ಕೇವಲ ಒಂದು ಸಾವಿರ ರೂಪಾಯಿ ಒಳಗೆ ಈ ಆನೆಯ ಪೃತಿಕೃತಿಯನ್ನು ತಯಾರಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದೇವಿಯ ಸೇವೆಗಾಗಿ ವೇಷಗಳನ್ನು ಮಾಡುತ್ತಿದ್ದೇವೆ. ಕಳೆದ ವರ್ಷಗಳಲ್ಲಿ ಸಿಂಹ ಸೇರಿದಂತೆ ವಿವಿಧ ವೇಷಗಳನ್ನು ಮಾಡಿದ್ದೇವು, ಈ ಬಾರಿ ಆನೆಯ ವೇಷ ಮಾಡಿದ್ದೇವೆ. ಜನರಿಗೆ ತುಂಬಾ ಖುಷಿಯಾಗಿದೆ. ಈ ಕಾರ್ಯ ಹಣಕ್ಕಾಗಿ ಮಾಡುತ್ತಿಲ್ಲ. ದೇವಿಯ ಸೇವೆ ಅಂತಾ ಪರಿಗಣಿಸಿ ಮಾಡುತ್ತಿದ್ದೇವೆ ಎಂದು ದಿನೇಶ್ ಹೇಳಿದ್ದಾರೆ.